Sunday, September 19, 2021

ಶಕವರ್ಷದಿಂದ ಇಂಗ್ಲೀಷ್ ಕ್ಯಾಲೆಂಡರ್ ವರ್ಷಕ್ಕೆ ಬದಲಾಯಿಸುವುದು

 ಶಕವರ್ಷದಿಂದ ಇಂಗ್ಲೀಷ್ ಕ್ಯಾಲೆಂಡರ್ ವರ್ಷಕ್ಕೆ ಬದಲಾವಣೆಗಾಗಿ ಶಕವರ್ಷಕ್ಕೆ ೭೭ ಸೇರಿಸಬೇಕು


ಉದಾಹರಣೆ: ಶಕವರ್ಷ ೧೮೫೦ - ಇಂಗ್ಲೀಷ್ ವರ್ಷ : ೧೮೫೦ + ೭೭ = ೧೯೨೭

Saturday, September 30, 2017

ಯಕ್ಷಗಾನದ ನಂಟು ಹೆಚ್ಚಿಸಿದ ಅಜ್ಜನ ಮನೆ...

LN Bhat, [11.12.15 20:21]
ಯಕ್ಷಗಾನದ ನಂಟು ಹೆಚ್ಚಿಸಿದ ಅಜ್ಜನ ಮನೆ...
-------------------------------------
ನಾನು ಪ್ರಾಥಮಿಕ ಶಾಲೆಯಲ್ಲಿದ್ದ ಸಮಯ ಬೇಸಿಗೆ ರಜೆಯಲ್ಲಿ ನನ್ನ ಅಜ್ಜನ ಮನೆ ಅಂದರೆ ತಾಯಿಯ ತಂದೆಯ ಮನೆಗೆ ರಜೆ ಕಳೆಯುವುದಕ್ಕಾಗಿ ಹೋಗುತ್ತಿದ್ದೆ. ಬಳಪ ರಕ್ಷಿತಾರಣ್ಯದ ಅಂಚಿನಲ್ಲಿ ದಟ್ಟ ಕಾನನದ ನಡುವೆ ಹೊರಗಿನ ಪ್ರಪಂಚದ ಸಂಪರ್ಕಕ್ಕೆ ಸುಲಭವಾಗಿ ಸಿಗದಂತೆ ಮಾಡಿದ್ದ ಹೊಳೆಯನ್ನು ದಾಟಿ ಪಲ್ಲೋಡಿ ಎಂಬಲ್ಲಿಂದ ಬಸ್ಸಿನಿಂದ ಇಳಿದು ಹೋಗಬೇಕಾಗಿತ್ತು. ಬೇಸಿಗೆಯ ಸಮಯದಲ್ಲಾದರೋ ಹೊಳೆಯಲ್ಲಿ ಸೆಳೆತ ಕಡಿಮೆ ಇರುತ್ತಿದ್ದುದರಿಂದ ಹೊಳೆಯಲ್ಲಿ ಇಳಿದೇ ದಡದಿಂದ ದಾಟಬಹುದಾಗಿತ್ತು. ಮಳೆಗಾಲದ ಸಮಯಕ್ಕೇನಾದರೂ ಅಜ್ಜನ ಮನೆಗೆ ಹೋದರೆ ಆ ಹೊಳೆಯನ್ನು ದಾಟಬೇಕಾದರೆ ಹರ ಸಾಹಸ ಪಡಬೇಕಾಗುತ್ತಿತ್ತು, ಊರವರೆಲ್ಲಾ ಸೇರಿ ಪ್ರತೀ ವರ್ಷ ಅಡಿಕೆ ಮರಗಳಿಂದ ನಿರ್ಮಿಸಿದ ಸೇತುವೆಯನ್ನು(ಸಂಕ) ನಿರ್ಮಾಣ ಮಾಡುತ್ತಿದ್ದರು ಮೂರು ಅಡಕೆ ಮರಗಳನ್ನು ಒಂದರ ಪಕ್ಕ ಒಂದು ಕಟ್ಟಿ ಅದನ್ನು ಭದ್ರವಾಗಿ ಭಂದಿಸಿ ನಾವು ನಡೆದು ಹೋಗಬಹುದಾದ ನಿರ್ಮಾಣವನ್ನು ರಚಿಸುತ್ತಿದ್ದರು, ಬಹುಷ ೩೦-೪೦ ಮೀಟರ್ ಉದ್ದದ ಇಂತಹ ಸೇತುವೆಯ ಮೇಲೆ ಮಳೆಗಾಲದಲ್ಲಿ ಕೆಂಪನೆ ನೀರು ಕೆಳಗೆ ೨೦ ಅಡಿ ಕೆಳಗೆ ವೇಗವಾಗಿ ಹರಿದು ಹೋಗುತ್ತಿದ್ದರೆ ಮೇಲೆ ಸೇತುವೆಯಲ್ಲಿ ನಡೆಯುತ್ತಿದ್ದ ನನಗೆ ಬರುತ್ತಿದ್ದ ಭಾವ ಒಂದೇ "ನಾನೇನಾದರೂ ಕೆಳಗೆ ಬಿದ್ದುಬಿಟ್ಟರೆ !". ದೊಡ್ಡವರೆಷ್ಟೇ ಧೈರ್ಯ ಹೇಳಿ "ಮುಂದಕ್ಕೆ ನೋಡು ಏನೂ ಆಗುವುದಿಲ್ಲ" ಎಂದು ಆಶ್ವಾಸನೆಯನ್ನು ಕೊಟ್ಟರೂ ಕಣ್ಣಿನ ದೃಷ್ಟಿ ಮಾತ್ರ ಹರಿವ ನೀರಿನಿಂದ ಕದಲುವುದಕ್ಕೆ ಒಪ್ಪುತ್ತಲೇ ಇರಲಿಲ್ಲ. ಸಂಕ(ಸೇತುವೆ) ದಾಟದೆ ವಿಧಿಯೂ ಇರಲಿಲ್ಲ.

ಪುತ್ತೂರಿನಿಂದ ಬಹುಷ ಗಂಟೆಗೊಂದರಂತೆ ಬಸ್ಸುಗಳಿದ್ದವು ಬೆಳ್ಳಾರೆ ಅಥವಾ ಕಾಣಿಯೂರು ಮಾರ್ಗವಾಗಿ ಸಾಗುವಾಗ ಪಂಜದ ಬಳಿಕ ಸಿಗುವ ಊರದು. ಅಡಕೆ, ಬಾಳೆ, ತೆಂಗು, ಗೆಣಮೆಣಸು(Pepper),ಕೋಕೋ ಹೀಗೆ ವಾಣಿಜ್ಯ ಬೆಳೆಗಳ ನಡುವೆ ಮಾವು, ಗೇರು, ಹಲಸು ಜತೆಗೆ ಮಳೆಗಾಲದಲ್ಲಿ ತರಕಾರಿಗಳನ್ನೂ ಬೆಳೆಯುತ್ತಿದ್ದರು. ಅಜ್ಜ, ಅಜ್ಜಿ, ನಾಲ್ಕು ಜನ ಮಾವಂದಿರು, ನನ್ನ ಚಿಕ್ಕಮ್ಮ,ನನ್ನ ದೊಡ್ಡ ಮಾವನ ಹೆಂಡತಿ (ಅತ್ತೆ) ಇವರಿಗೆಲ್ಲಾ ನಾನೊಬ್ಬ ಸೆಲೆಬ್ರಿಟಿಯಂತೆ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನನ್ನ ಸಣ್ಣ ಮಾವಂದಿರು ಗೋಪಾಲ ಮತ್ತು ವಿಷ್ಣು ಈರ್ವರೂ ಅವಳಿ ಸಹೋದರರು. ಅವರ ಜತೆಗೆ ಬೆಳಗ್ಗೆಯೇ ಪಕ್ಕದ ಕಾಡಿಗೆ ತೆರಳಿ ಅಲ್ಲಿಂದ ಸೊಪ್ಪು ಸವರಿ ತಂದು ದನದ ಹಟ್ಟಿ(ಕೊಟ್ಟಿಗೆ) ಗೆ ಹಾಕುವ ಸಂಭ್ರಮ. ಕಾಡಿನ ಪೊದರುಗಳಲ್ಲಿ ವಿಚಿತ್ರವಾಗಿ ಬೆಳೆದಿರುತ್ತಿದ್ದ ಬಳ್ಳಿಗಳು , ಬಾನೆತ್ತರಕ್ಕೆ ಬೆಳೆದು ಅಷ್ಟಗಲದ ಕಾಂಡದ ಮರಗಳು, ಝೀರುಂಡೆಯ ಶಬ್ದ, ನೀರಸೆಲೆಗಳಿರುವಲ್ಲಿ ಕಾಲನ್ನೇರಿ ನೆತ್ತರನ್ನು ಕುಡಿದು ದಪ್ಪಗಾಗುತ್ತಿದ್ದ ಉಂಬುಳ(ಜಿಗಣೆ)ಗಳನ್ನು ಕಾಲಿಂದ ಎಳೆದು ತೆಗೆಯುವಾಗ ಆಗುತ್ತಿದ್ದ ನೋವು ಮತ್ತೆ ಅವನ್ನೇ ಹಿಡಿದು ಮನಸೋ ಇಚ್ಛೆ ಬೈದು ದೂರ ಎಸೆಯುತ್ತಿದ್ದುದು. ಬಾಳೆ ಎಲೆಗಳನ್ನು ಕೊಯ್ಯುವುದು, ಹುಲ್ಲು ಮಾಡುವುದು, ಅಡಕೆ ಹೆಕ್ಕುವುದು, ಅಡಕೆ ಮರಗಳಿಗೆ ಔಷಧ ಸಿಂಪಡಿಸುವ ವೇಳೆಯಲ್ಲಿ ಯಂತ್ರಕ್ಕೆ ಗಾಳಿ ಹಾಕುತ್ತಿದ್ದುದು, ಕೋಕೋ, ಗೇರುಬೀಜ ಜತೆಗೆ ಯಾವುದೋ ಮರವೊಂದರ ಹೂಗಳನ್ನು ಸಂಗ್ರಹಿಸುತ್ತಿದ್ದುದು, ನೀರಿನಲ್ಲಿ ನೆನೆಯುತ್ತಾ ನೆನೆಯುತ್ತಾ ತೋಟದ ಸ್ಪಿಂಕ್ಲರ್ ಗಳನ್ನು ಬದಲಿಸಿ ಬದಲಿಸಿ ಹಾಕುವ ಮೋಜು ಎಲ್ಲವೂ ಈಗ ನೆನಪುಗಳಷ್ಟೆ. ನನ್ನ  ಸಣ್ಣ ಮಾವಂದಿರಿಬ್ಬರೂ ಒಬ್ಬರನ್ನೊಬ್ಬರು ಹಿಂಬಾಲಿಸಿದಂತೆ ಅಕಾಲದಲ್ಲಿ ಅಗಲಿದರು, ಆ ಮೇಲೆ ಅಜ್ಜನ ಮನೆಗೆ ಹೋದಾಗಲೆಲ್ಲಾ ಕಾಡಿನ ಸೌಂದರ್ಯವೆಲ್ಲಾ ಮಾಯವಾದಂತೆನಿಸಿತು. ಕಾಡಿನ ಪ್ರತೀ ಎಲೆಯೂ ಅವರ ಕೈಯ ಸ್ಪರ್ಶಕ್ಕಾಗಿ ಕಾದು ಕೂತಿತ್ತೇನೋ ಅನ್ನಿಸುತ್ತಿತ್ತು. ಇಬ್ಬರೂ ಸೇರಿ ಯಾವತ್ತೂ ಜತೆಗೇ ಕೆಲಸ ಮಾಡುವವರು. ಇಬ್ಬರೂ ಸೇರಿ ನಾಲ್ಕಾಳಿನ ಹೊರೆ ಹೊರುವವರು, ನಾಲ್ಕು ಜನರ ಕೆಲಸ ಇಬ್ಬರೇ ನಿಭಾಯಿಸುವವರು. ಇಬ್ಬರೂ ಸೇರಿ 65 ವರ್ಷಗಳ ಆಯಸ್ಸನ್ನು ಜತೆ ಸೇರಿಸಿ ಒಂದು ದಿನವೂ ಸೋಮಾರಿಗಳಂತೆ ಕೂತಿರದೇ ಕೊನೆಯವರೆಗೂ ದುಡಿದು ಅಗಲಿದರು. ಬಹಳಷ್ಟು ಕಾಲ ಅವರ ಅಗಲುವಿಕೆಯ ದುಃಖ ಎಲ್ಲರನ್ನೂ ಕಾಡಿತ್ತು. ಈಗಲೂ ಬಹುವಾಗಿ ನೆನಪಾಗುವ ಶ್ರಮಜೀವಿಗಳು ಅವರು. ಪ್ರತೀ ಸಂದರ್ಭದಲ್ಲೂ ತನ್ನ ಒಡನಾಡಿಯಂತಿದ್ದ ತಮ್ಮ ಅಗಲಿದ ಬಳಿಕ ಅಣ್ಣನಾಗಿದ್ದವನ ದುಃಖ ಯಾರಿಗಾದರೂ ಊಹಿಸುವುದು ಅಸಾಧ್ಯ. ಬಹಳ ಕಾಲ ಪ್ರತೀ ದಿನವೂ ಊಟದ ಹೊತ್ತಿಗೆ ನಾಲ್ಕು ಬಟ್ಟಲುಗಳಿಡುವ ಮನೆಯಲ್ಲಿ ಯೋಚನೆಯೇ ಇಲ್ಲದೆ ಆವತ್ತೂ ಮನೆಯ ಹೆಣ್ಮಕ್ಕಳು ನಾಲ್ಕು ಬಟ್ಟಲನ್ನಿಟ್ಟು, ಒಂದು ಬಟ್ಟಲನ್ನು ಮತ್ತೆ ಪಾತ್ರೆಯ ಕಪಾಟಿಗೆ ಹಿಂದಿರುಗಿಸುವಾಗ ಕಣ್ಣ ನೀರ ಒಂದು ಹನಿಯೂ ಆ ಬಟ್ಟಲ ಜತೆ ಕಪಾಟನ್ನು ಸೇರುತ್ತಿತ್ತು. ತನ್ನ ಮಕ್ಕಳು ತನ್ನ ಜತೆ ಊಟಕ್ಕಾಗಿ ಬರುವುದನ್ನು ಕಾಯುತ್ತಾ ಕುಳಿತಿರುತ್ತಿದ್ದ ಅಜ್ಜನಿಗೆ ಆ ಮಗನ ಹೆಸರನ್ನು ಕರೆಯದೇ ಊಟಕ್ಕೆ ಕುಳಿತು ಎಷ್ಟು ದಿನ ಅನ್ನ ರುಚಿಸಲಿಲ್ಲವೋ ದೇವರಿಗೇ ಗೊತ್ತು. ಅನ್ನದ ಜತೆಗೆ ಬೆರೆತ ಕಣ್ಣ ನೀರ ಲೆಕ್ಕ ಆ ಮನೆಯ ಬಟ್ಟಲುಗಳಿಗೇ ಗೊತ್ತು.ತೀವ್ರ ಅನಾರೋಗ್ಯ ಭಾದಿಸಿ ಎರಡೆರಡು ಬಾರಿ ಜವರಾಯನ ಮನೆಯ ಕದತಟ್ಟಿ ಅಜ್ಜ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು, ಆದರೆ ಏನೂ ಆಗದೆ ನನ್ನೆರಡು ಮಂದಿ ಮಾವಂದಿರನ್ನೆ ಅಜ್ಜನ ಮನೆಯಿಂದ ಅವ ಕರೆಸಿಕೊಂಡಿದ್ದ. ಅಂತಹ ಅಜ್ಜನ ಮನೆಗೆ ಹೋದಾಗ ಪ್ರತೀ ಬಾರಿಯೂ ಸಂತೋಷ ಮತ್ತು ದುಃಖ ಎರಡು ಭಾವಗಳೂ ಕಾಡದೆ ಇರುವುದಿಲ್ಲ.

ಏನೇ ಇರಲಿ ಕಾಡುಮೇಡು, ತೋಟ ,ಜೇನು , ದನ ಕರು ಇವೆಲ್ಲದರ ಜತೆಗಿನ ಒಡನಾಟದ ಸುಖದ ಜತೆಯಲ್ಲಿ, ಅಲ್ಲಿದ್ದ ಮತ್ತೆರಡು ಪ್ರಮುಖ ಆಕರ್ಷಣೆಗಳೆಂದರೆ ನನ್ನ ದೊಡ್ಡಮಾವನ ಪ್ರೀತಿ ಪಾತ್ರವಾಗಿದ್ದ ಒಂದು ರೀಡಿಯೋ ಮತ್ತು ಇನ್ನೊಂದು ಟೇಪ್ ರೆಕಾರ್ಡರ್. ಪ್ರತೀ ದಿನವೂ ಸಂಜೆಯವೇಳೆಗೆ ಪ್ರಸಾರವಾಗುತ್ತಿದ್ದ ಪ್ರದೇಶ ಸಮಾಚಾರ ಮತ್ತು ಅದರ ಬಳಿಕದ ವಾರ್ತೆ ಇವೆರಡನ್ನು ಯಾವತ್ತೂ ನನ್ನ ಮಾವ ಬಿಟ್ಟದ್ದೇ ಇಲ್ಲ ಅನ್ನಿಸುತ್ತದೆ. ಪ್ರತೀ ಬುಧವಾರ ರಾತ್ರಿ ಪ್ರಸಾರವಾಗುತ್ತಿದ್ದ ತಾಳಮದ್ದಳೆಯೂ ಅಶ್ಟೇ. ಸಂಜೆ ಆರಕ್ಕೋ ಆರೂವರೆಗೋ ಸರಿಯಾಗಿ ಸ್ನಾನ ಮುಗಿಸಿ ಬಂದು ಮನೆಯ ಮೂಲೆಯ ಕಪಾಟೊಂದರಲ್ಲಿ ಮೌನವಾಗಿರುತ್ತಿದ್ದ ರೇಡಿಯೋದ ಮೌನ ಮುರಿದು ಆ ಹಳ್ಳಿಯನ್ನು ಪ್ರಪಂಚದ ಜತೆಗೆ ಬೆಸೆಯ



ುವ ಕಾರ್ಯ ಯಾವತ್ತೂ ನಡೆಯುತ್ತಿತ್ತು. ಆಗೊಮ್ಮೆ ಈಗೊಮ್ಮೆ ಬಂದು ಹೋಗಿ ತುಂಟತನ ಮೆರೆಯುತ್ತಿದ್ದ ಕರೆಂಟಿನ ನಂಟನ್ನು ಬೆಸೆಯದೆಯೂ ರೇಡಿಯೋ ನಡೆಯುತ್ತಿತ್ತು. ಮಳೆಗಾಲದಲ್ಲಿ ಆಕಾಶವೇ ಹರಿದಂತೆ ಸುರಿಯುವ ಮಳೆಯ ಹೊರತು ಪ್ರತಿದಿನವೂ ಈ ಫಿಲಿಪ್ಸ್ ರೇಡಿಯೋ ತನ್ನ ಕರ್ತವ್ಯವನ್ನು ಚಾಚೂತಪ್ಪದೆ ನಿಭಾಯಿಸುವಲ್ಲಿ ಆ ಮನೆಯ ಪ್ರತಿಯೊಬ್ಬ ವ್ಯಕ್ತಿಯ ಪ್ರಾಮಾಣಿಕತೆಯ ಜತೆ ತನ್ನನ್ನು ತಾನೂ ಸೇರಿಸಿಕೊಂಡಿತ್ತು. ಇನ್ನು ಟೇಪ್ ರೆಕಾರ್ಡರ್. ನಮ್ಮ ಮನೆಯಲ್ಲಿ ಟೇಪ್ ರೆಕಾರ್ಡರ್ ಎನ್ನುವ ವಸ್ತು ಇರಲಿಲ್ಲ ಅಂತಹದ್ದೊಂದು ಇದೆ ಎನ್ನುವ ಕಲ್ಪನೆಯೂ ನನ್ನಲ್ಲಿರಲಿಲ್ಲ. ನಾನು ಮೂರನೆಯಲ್ಲೋ ನಾಲ್ಕನೆಯಲ್ಲೋ ಇದ್ದಿರಬೇಕು ರಜೆಯಲ್ಲಿ ಅಜ್ಜನ ಮನೆಗೆ ಹೋದವನಿಗೆ ಆಶ್ಚರ್ಯವನ್ನುಂಟು ಮಾಡಿದ ವಸ್ತು ಈ ಟೇಪ್ ರೆಕಾರ್ಡರ್. ಮೊದಲಬಾರಿ ನಾನು ಕೇಳಿದ್ದ ಧ್ವನಿಸುರುಳಿಗಳು ಬಲಿಪ ಭಾಗವತರ ಕರ್ಣಭೇದನ, ಕುಂಭಕರ್ಣ ಕಾಳಗ, ಪೊಲ್ಯ ಶೆಟ್ರ ಬಪ್ಪನಾಡು ಕ್ಷೇತ್ರ ಮಹಾತ್ಮೆ, ದಿನೇಶ್ ಅಮ್ಮಣ್ಣಾಯರ ಹೆಡ್ಡಧೂಮ. ಈ ಧ್ವನಿಸುರುಳಿಗಳನ್ನು ಮತ್ತೆ ಮತ್ತೆ ಕೇಳುವುದರಲ್ಲಿ ಏನೋ ಆನಂದ ಜೀವನ ಪರ್ಯಂತ ಎಲ್ಲಿ ಕೇಳಿದರೂ ಆ ಅರ್ಥಧಾರಿಗಳು, ಭಾಗವತರು ಅವರೇ ಎನ್ನುವ ಪರಿಚಯವೂ ಈ ಮೂಲಕವೇ ಗಟ್ಟಿಯಾಯ್ತು. ಕ್ಯಾಸೆಟ್ ಕವರ್ ಗಳನ್ನು ನೋಡಿ ಓದಿಯೇ ಧ್ವನಿಯನ್ನು ಪರಿಚಯಿಸುತ್ತಾ ಬೆಳೆದೆ, ಬಲಿಪರ ಚಿತ್ರಗಳೂ ಧ್ವನಿಸುರುಳಿಗಳಲ್ಲಿದ್ದುದರಿಂದ ಬಲಿಪ ಭಾಗವತರು ಅತ್ಯಂತ ಅಪ್ಯಾಯಮಾನರೆನಿಸಿದರು. ಎಲವೊ ಪಾತಕಿ ಬರಿದೆ ಸಾಯದಿರೊಲಿದು ಪಾಂಡವರುಗಳ ಕೂಡಿಕೊ ಎನ್ನುತ್ತಾ ಬಲಿಪರ ಕಂಠದ ದನಿ ಆ ಕ್ಯಾಸೆಟ್ ನಿಂದ ಹರಿದಾಗ ಬಲಿಪರ ಪದ್ಯಕ್ಕಾದರೂ ಕೌರವ ಐದು ಗ್ರಾಮಗಳನ್ನು ಕೊಟ್ಟಾನೋ ಎನ್ನುವ ಆಶಾಭಾವ ಮೂಡುತ್ತಿತ್ತು.  ಆ ಮೇಲೆ ಎಲ್ಲಿಯಾದರೂ ನಮ್ಮೂರಿಗೆ ಕಟೀಲು ಮೇಳ ಬಂದಾಗ ಆ ಧ್ವನಿಸುರುಳಿಯಲ್ಲಿ ಕೇಳಿದ ಬಲಿಪ ಭಾಗವತರ ದನಿ ಕೇಳೀತೋ ಎಂದು ಹುಡುಕುತ್ತಿದೆ. ನಮ್ಮ ಊರಿಗೆ ನನಗೆ ನೆನಪಿರುವ ಹಾಗೆ ಒಂದು ಬಾರಿಯೂ ಬಲಿಪರು ಬರಲಿಲ್ಲ, ಭಾಗವತ,ರಾಮಾಯಣ,ಮಹಾಭಾರತದ ಕಥೆಗಳನ್ನು ಜನಮಾನಸದಲ್ಲಿ ಅಚ್ಚೊತ್ತುವಂತೆ ರಸಭಾವಗಳನ್ನು ಸಾಕ್ಷಾತ್ಕರಿಸುತ್ತಿದ್ದ ಆ ಪುಣ್ಯ ಜೀವಿಯ ಪಾದಸ್ಪರ್ಶ ಮಾಡಿಸಿಕೊಳ್ಳುವ ಯೋಗ ನನ್ನ ಊರಿನ ಮಣ್ಣಿಗೆ ಇಲ್ಲದೇ ಹೋಯ್ತು. ಇನ್ನು ಪೊಲ್ಯದವರ ಗಾನ ಸುಧೆಗೆ ತಲೆಯಾಡಿಸುತ್ತಾ ಬಪ್ಪನಾಡಿನ ಕಥೆಯನ್ನು ತಿಳಿದುಕೊಂಡದ್ದು, ಯಾವುದೇ ಪುಸ್ತಕ ಓದಿಲ್ಲ. ಯಾರೇ ಮುಸಲ್ಮಾನರು ಕಂಡರೂ ನೆನಪಾಗುತ್ತಿದ್ದವ ಬಪ್ಪಬ್ಯಾರಿಯೇ, ನಮ್ಮ ಊರಿನ ಮೀನು ಮಾರುವ ಬ್ಯಾರಿಯಲ್ಲೂ ಬಪ್ಪನೇ ಇದ್ದ, ನನ್ನ ತರಗತಿಯ ಸಹಪಾಠಿಗಳೂ ಬಪ್ಪನ ಜಾತಿಯವರೇ ಅನ್ನುವ ಹೆಮ್ಮೆ. ಕಾಲ ಕಾಲಕ್ಕೂ ಅಜ್ಜನ ಮನೆಯ ಭೇಟಿ ಯಕ್ಷಗಾನದ ಹುಚ್ಚನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಅಜ್ಜನ ಮನೆಯಲ್ಲಿ ಮಾತ್ರ ಟೇಪ್ರೆಕಾರ್ಡರ್ ಇದ್ದುದರಿಂದ ಅಲ್ಲಿ ಮಾತ್ರವೇ ಯಕ್ಷಗಾನದ ನಾದ ಬೇಕಾದಾಗ ಕೇಳಬೇಕಿತ್ತು. ಮತ್ತೆ ನನ್ನಪ್ಪನೂ ಒಂದು ಟೇಪ್ ರೆಕಾರ್ಡರ್ ಕೊಂಡು ತಂದರು, ಬಲಿಪ, ತೆಂಕಬೈಲು, ಪದ್ಯಾಣ, ಪುತ್ತಿಗೆ ಇವರ ಪರಿಚಯವೂ ಬೆಳೆಯುತ್ತಾ ಹೋಯಿತು. ಕ್ಯಾಸೆಟ್ ಗಳ ಸಂಖ್ಯೆ ಏರುತ್ತಾ ಹೋಯಿತು, ಅಪ್ಪ ಹೊಸ ಕ್ಯಾಸೆಟ್ ಕೊಂಡು ತಂದಾಗಲೆಲ್ಲ ನಾಲ್ಕಾರು ದಿನ ಆ ಕ್ಯಾಸೆಟ್ ಗಳನ್ನು ಹಾಕಿ ಕೇಳುವುದೇ ಅಭ್ಯಾಸವಾಯ್ತು. ಕ್ಯಾಸೆಟ್ ಹಾಕಿ ಪದ್ಯಗಳಿಗೆ ಕುಣಿದು ಅಭ್ಯಸಿಸುವುದು, ಇದು ಆ ತಾಳ ಇದು ಈ ತಾಳ ಎನ್ನುವುದಾಗಿ ತಾಳಗಳನ್ನು ಗುರುತಿಸಿ ಸಂತೋಷಪಡುವುದು. ಆ ಗಮ್ಮತ್ತೇ ಗಮ್ಮತ್ತು, ೧೯೮೫ ರಲ್ಲಿ ಬಿಡುಗಡೆಯಾಗಿದ್ದ ಬಲಿಪ ಭಾಗವತರ ತೆಂಕುತಿಟ್ಟು ಹಿಮ್ಮೇಳ ಎನ್ನುವ ಹಳೇ ಕ್ಯಾಸೆಟ್ ಎಷ್ಟು ಬಾರಿ ಕೇಳಿದರೂ ಮನಸ್ಸು ಹುಚ್ಚೆದ್ದು ಕುಣಿಯುವಂತಿತ್ತು, ಬಲಿಪ ಪುತ್ತಿಗೆಯವರು ಮೊದಲಬಾರಿ ಜತೆಯಾಗಿ ದ್ವಂದ್ವದಲ್ಲಿ ಕಾಣಿಸಿಕೊಂಡದ್ದು ಬಹುಷಃ ಕುಮಾರವಿಜಯದ ಕ್ಯಾಸೆಟ್ ಇರಬಹುದು, ಇವರಿಗೂ ಆ ಪದ್ಯಗಳನ್ನು ಕೇಳಿದಾಗ ಅತ್ಯಂತ ರೋಮಾಂಚನವಾಗುತ್ತದೆ. ಆ ಮೇಲೆ ನಮ್ಮ ಮನೆಗೆ ಕಂಪ್ಯೂಟರ್ ಬಂದ ಮೇಲೆ ಕೆಲವಾರು ಕ್ಯಾಸೆಟ್ ಗಳನ್ನು ಎಮ್ ಪಿ ತ್ರಿ ಮಾಡಿ ಇಟ್ಟಿದ್ದೆ, ಆ ಬಳಿಕ ವೀಡಿಯೋ ಸಿಡಿಗಳೂ ಬರಲಾರಂಭಿಸಿದವು. ಆದರೆ ಕ್ಯಾಸೆಟ್ ಯುಗದ ಸೊಗಸೇ ಬೇರೆ ಅಲ್ಲಿನ ಹಿಮ್ಮೇಳದ ನಾದಕ್ಕೆ ಏನೋ ಅದಮ್ಯ ಶಕ್ತಿಯಿದ್ದಂತೆನಿಸುತ್ತದೆ. ಈಗಿನ ಹಿಮ್ಮೇಳದಲ್ಲಿರುವ ಕೊರತೆಗಳು ಆಗಿನ ಒಂದು ಪದ್ಯ ಕೇಳಿದಾಗ ಎದ್ದು ಕಾಣುತ್ತವೆ. ಅಲ್ಲಿ ಮದ್ದಳೆ ಚೆಂಡೆ ಹರಟೆ ಎನ್ನಿಸುತ್ತಿರಲಿಲ್ಲ, ಪದ್ಯ ಯಾಕಪ್ಪಾ ಒಮ್ಮೆ ಮುಗಿಯುವುದಿಲ್ಲ ಅನ್ನಿಸುತ್ತಿರಲ್ಲ, ವೈಯಕ್ತಿಕ ಅಭಿಮಾನಗಳಿರುತ್ತಿರಲಿಲ್ಲ. ಏಕಾಮೇವಾದ್ವಿತೀಯ ಕಲಾವಿದರೇ ಎಲ್ಲರೂ, ಅವರವರ ಪ್ರತಿಭೆ ಸಾಮರ್ಥ್ಯಗಳು ವಿಭಿನ್ನವಾಗಿದ್ದವು. ಪ್ರತಿಯೊಂದು ಧ್ವನಿಸುರುಳಿಯೂ ಅನನ್ಯವೆನಿಸಿತ್ತು.

ಯಕ್ಷಗಾನಂ ಗೆಲ್ಗೆ.

Sunday, April 10, 2016

ಕರ್ಣ

ಹೀಗೇ ದೊರಕಿದ ಪ್ರೇರಣೆಯಿಂದ ರಚಿಸಿದ ಭಾಮಿನಿಗಳೆರಡು.

ಭಾಮಿನಿ
ಇತ್ತ ಮದಗಜ ಸಿಂಹ ಹತಿಯೊಳು|
ತತ್ತರಿಸಿ ಕೆಡೆವಂತೆ ಬಿದ್ದನು|
ಬಿತ್ತರಿಪುದೇನ್ ಕರ್ಣ ರಣದಲಿ ಪಾರ್ಥನಸ್ತ್ರದಲಿ ||
ಮತ್ತೆ ಸುಳಿದವು ತನ್ನ ಜೀವದ|
ಸುತ್ತ ಸುತ್ತಿದ ಹಲವು ಭಾವಗ
ಳತ್ತಲೀಂಟುತ ಕಮಲಮಿತ್ರನ  ತನುಜ ನುಸಿರುಗ|ಳ||

ಮದಗಜವೊಂದು ಸಿಂಹದ ಹತಿಯಿಂದ ಮೂರ್ಛೆಗೊಂಡು ಧರೆಗುರುಳುವಂತೆ, ಅರ್ಜುನನ ಅಸ್ತ್ರಗಳ ಪ್ರಭಾವದಿಂದ ಕರ್ಣ ಧರೆಗುರುಳಿದ್ದಾನೆ. ತನ್ನ ಮರಣ ಸನ್ನಿಹಿತವಾಗುತ್ತಿದೆಯೆಂಬ ಅರಿವಾತನಿಗಾಗತೊಡಗುತ್ತದೆ, ಅವನ ಜೀವನದಲ್ಲಿ ನಡೆದಂತಹ ಘಟನಾವಳಿಗಳ ನೆನಪುಗಳೂ ಸಹಾ ಅರ್ಜುನನ ಅಸ್ತ್ರಗಳಂತೆಯೇ ಕಮಲಮಿತ್ರ ಸೂರ್ಯನ ಮಗನ ಜೀವವನ್ನು ಹೀರುವುದಕ್ಕಾಗಿಯೋ ಎಂಬಂತೆ ಸುಳಿದು ಸುಳಿದು ಬರುತ್ತಾ ಇವೆ.

ತರಣಿ ತರಳನೆ ಮಡಿಲೊಳೊರಗಿರೆ|
ತರುಣಿ ಮೊಗದಲಿ ಬೆಳಕು ಬರದೈ|
ಕರುಣದಲಿ ನಿರುಕಿಸುತ ಕುಂತಿಯು ಅಳುವ ಜೀವವನು|
ತರಳ ನಿನ್ನನು ಪೊರೆವ ಭಾಗ್ಯವ |
ತರಳತನಕಿದೊ ಬಲಿಯಗೊಟ್ಟೆನು |
ಹರನೆ ಪೊರೆಯಲೆನುತ್ತ ನಡೆದಳು ನದಿಯತಟಿಗಂದು||

ಸೂರ್ಯನ ಮಗನೇ ಮಡಿಲಲ್ಲಿ ಮಲಗಿದ್ದರೂ, ಕುಂತಿಯ ಮುಖದಲ್ಲಿ ಸಂತೋಷವಿಲ್ಲ. ಇನ್ನೇನು ಮಾಡುವುದೆಂದು ಅಳುತ್ತಿರುವ ಕೂಸನ್ನು ಕರುಣೆಯಿಂದ  ನೋಡುತ್ತಾ ಮಗನೇ ನಿನ್ನನ್ನು ಲಾಲಿಸುವ ಪಾಲಿಸುವ ಭಾಗ್ಯವನ್ನು ನಾನು ಕಳಕೊಂಡಿದ್ದೇನೆ, ಮಕ್ಕಳಾಟಿಕೆಯಿಂದಾಗಿ ನಿನ್ನ ಜೀವನವನ್ನು ಬಲಿಕೊಟ್ಟಿದ್ದೇನೆ. ಇನ್ನು ನಿನ್ನನ್ನು ಆ ಹರನೇ ಕಾಯಲಿ, ಅವನೇ ಪೊರೆಯೆಲಿ ಎನ್ನುತ್ತಾ ನದಿಯ ತೀರಕ್ಕೆ ಬಂದಳು.

Saturday, November 28, 2015

ಅಸಹನೆ


ಜಳ್ಳು - ಪೊಳ್ಳಿನ ನಡುವೆ ಸತ್ಯವನು ಅರಸುವುದು ಕಲಿಯುಗದ ಕರ್ಮ.

ಯಾವುದೋ ಒಂದು ಘಟನೆಗೆ ಅಥವಾ ವಿಷಯಕ್ಕೆ ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದುಕೊಂಡಿದ್ದರೂ , ಸಮಯ - ಸಂದರ್ಭ, ವಿವೇಕ, ಮುಜುಗರ ಇಂತಹವುಗಳಿಗೆ ಸಿಲುಕಿ ಆ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗದೆ ಮೂಕರಾಗಿದ್ದುಬಿಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಆ ವಿಷಯ ಅಸಹನೆಯಾಗಿ ಮಾರ್ಪಡುತ್ತದೆ ಅದು ಇನ್ನೆಲ್ಲೋ ಯಾರಮೇಲೋ ಪ್ರಕಟವಾಗಿ ಆಗಬಾರದ ನಕಾರಾತ್ಮಕ ಪರಿಣಾಮವೇ ಉಂಟಾಗುತ್ತದೆ. ಯಾವಾಗ ಎಲ್ಲಿ ಹೇಳಬೇಕಾದ್ದನ್ನು ಸರಿಯಾಗಿ ಹೇಳಿಯೇ ತೀರುತ್ತಾನೋ ಆತ ಹಿಂದೆ ಯಶಸ್ಸು ತಾನಾಗಿಯೇ ಹರಿದು ಬರುತ್ತದೆ, ಆತ ವಿವೇಕಿಯೆನ್ನಿಸಿಕೊಳ್ಳುತ್ತಾನೆ, ಇತರರಿಂದ ಮಾನಿಸಲ್ಪಡುತ್ತಾನೆ. ಆದ್ದರಿಂದ ಹೇಳಬೇಕಾದ ವಿಷಯವನ್ನು ನಯವಾಗಿ ಇತರರು ಒಪ್ಪುವಂತೆ ಯಾರಿಗೂ ನೋವಾಗದಂತೆ ತಿಳಿಸುವ ಕಲೆಯನ್ನು ಬಲ್ಲವನೇ ಶ್ರೇಷ್ಠನೆನ್ನಿಸುತ್ತಾನೆ.


Sunday, November 15, 2015

ಕಂಪ್ಯೂಟರ್ ನಲ್ಲಿ ವಾಟ್ಸಾಪ್ ಉಪಯೋಗಿಸುವುದು ಹೇಗೆ ?

ಕೆಲವು ತಿಂಗಳುಗಳ ಹಿಂದೆ ವಾಟ್ಸಾಪ್ ಈ ಸೌಲಭ್ಯವನ್ನು ಅಳವಡಿಸಿಕೊಂಡಿದೆ. ಮೊಬೈಲ್ ಮೂಲಕ ಸಂದೇಶಗಳನ್ನು ಬರೆಯುವುದು ಮತ್ತು ಓದುವುದು ಸ್ವಲ್ಪ ಶ್ರಮದಾಯಕವೇ ಉತ್ತಮವಾದ ಮೊಬೈಲ್, ದೊಡ್ಡದಾದ ಕೀಬೋರ್ಡ್ ಸೌಲಭ್ಯವಿರುವ ಮೊಬೈಲುಗಳಲ್ಲಿ ಬಹುಷಃ ಸ್ವಲ್ಪ ಆರಾಮವಾಗಿ ಕೀಬೋರ್ಡ್ ಉಪಯೋಗಿಸಬಹುದೇನೋ ಆದರೆ ಸಣ್ಣ ಡಿಸ್ಪ್ಲೇಯ ಫೋನ್ ಗಳಲ್ಲಿ ಕೆಲವೊಮ್ಮೆ ಇದು ಕಿರಿಕಿರಿಯೆನಿಸಬಹುದು.

ಮೊದಲಾಗಿ ನಿಮ್ಮ ಮೊಬೈಲ್ ನಲ್ಲಿ ವಾಟ್ಸಾಪ್ ತಂತ್ರಾಂಶವನ್ನು ಅಪ್ ಡೇಟ್ ಮಾಡಿಕೊಳ್ಳಿ ಆ ಬಳಿಕ ವಾಟ್ಸಾಪ್ ಅನ್ನು ತೆರೆದು ಮೆನುವಿನ್ನು ಸ್ಪರ್ಶಿಸಿ ವಾಟ್ಸಾಪ್ ವೆಬ್ ಆಯ್ಕೆಯನ್ನು ಒತ್ತಿ.



ನಿಮ್ಮ ಗಣಕದ ಬ್ರೌಸರ್ ನಲ್ಲಿ(ಕ್ರೋಮ್, ಮೋಝಿಲ್ಲಾ ಫೈರ್ ಫಾಕ್ಸ್) ನಲ್ಲಿ https://web.whatsapp.com/ ಅನ್ನು ಚಾಲೂಗೊಳಿಸಿ, ಕೆಳಗಿನ ಚಿತ್ರದಂತೆ, ಒಂದು ಕ್ಯೂ ಆರ್ ಕೋಡ್ ಕಾಣಿಸುತ್ತದೆ.

ಮೊಬೈಲ್ ನಲ್ಲಿ ಈ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವಂತೆ ವಾಟ್ಸಾಪ್ ತಂತ್ರಾಂಶ ಕ್ಯಾಮರಾವನ್ನು ಚಾಲೂ ಮಾಡಿರುತ್ತದೆ. ಮೇಲಿನ ಮೊದಲನೆ ಚಿತ್ರದಲ್ಲಿ ಕಂಡುಬರುವಂತೆ.

ಕ್ಯೂಆರ್ ಕೋಡ್ ಸ್ಕ್ಯಾನ್ ಆದ ತಕ್ಷಣ ಕಂಪ್ಯೂಟರ್ ನಲ್ಲಿ ವಾಟ್ಸಾಪ್ ಅನ್ನು ಉಪಯೋಗಿಸಲು ಪ್ರಾರಂಭಿಸಬಹುದು.

ಈರೀತಿಯಾಗಿ ಗಣಕದಲ್ಲಿ ವಾಟ್ಸಾಪ್ ಉಪಯೋಗಿಸುವುದಕ್ಕೂ ಸಹ ಮೊಬೈಲ್ ನಲ್ಲಿ ಇಂಟರ್ ನೆಟ್ ಸಂಪರ್ಕ ಲಭ್ಯವಿರಲೇಬೇಕು.

ಆದರೆ ಮೊಬೈಲ್ ನಲ್ಲಿ ಇಂಟರ್ನೆಟ್ ಇಲ್ಲದೆ ಗಣಕದ ಮೂಲಕವಾಗಿ ಮೊಬೈಲ್ ಗಳಿಗೆ ಸಂದೇಶ ವಿನಿಮಯ ಮಾಡುವ ವ್ಯವಸ್ಥೆ ಟೆಲಿಗ್ರಾಮ್ ಎನ್ನುವ ಇನ್ನೊಂದು ತಂತ್ರಾಂಶದಲ್ಲಿ ಲಭ್ಯವಿದೆ. ಆಸಕ್ತರು https://telegram.org/ ಸಂಪರ್ಕಿಸಿ.

Monday, October 19, 2015

ಕೋಸಂಬರಿ-ಅನ್ನದಾನ ಮತ್ತು ಕನ್ಯಾದಾನ



ಹೀಗೇ ಏನೋ ಸ್ಫೂರ್ತಿ ಉಕ್ಕಿ ಹರಿದಾಗ ಮನೆಯಲ್ಲಿರುವ ಪ್ರೇಕ್ಷಕರಿಗೇ; ಅಂದರೆ ನನ್ನ ಅಪ್ಪ, ಅಮ್ಮ ಮತ್ತು ನನ್ನ ಮಡದೀಮಣಿಯ ಮುಂದೆ ಭಾಷಣ ಬಿಗಿವ ಪುಡಾರಿ ನಾನು. ಒಂದು ದಿನ ಮಧ್ಯಾಹ್ನ ಭೋಜನಕ್ಕೆ ಗಡದ್ದಾಗಿ ,ಸ್ವತಃ ನನ್ನದೇ ಆಗಿದ್ದ ಎರಡೂ ಕೈಗಳಿಂದ ಒಂದು ಕೋಸಂಬರಿ ಮಾಡಿ ಮುಗಿಸಿದೆ, ಮನೆಯವರೆಲ್ಲರಿಗೂ ಅದನ್ನು ರುಚಿ ನೋಡಿಸಿ, ಎಲ್ಲರೂ ತಲೆಯಾಡಿಸಿ ಬಾಯಿ ಚಪ್ಪರಿಸುವಂತೆ ಮಾಡಿ ಮಾರ್ಕೆಟಿಂಗ್ ಮಾಡಿಯೂ ಆಯಿತು. ಬಳಿಕ ಊಟ ಪ್ರಾರಂಭವಾಯಿತು, ಸಂತೆಯಿಂದ ಹತ್ತುರೂಪಾಯಿ ಕೊಟ್ಟು ತಂದಿದ್ದ ನಾಲ್ಕು ಜೋಳಗಳಲ್ಲಿ ಎರಡರ ಮೈಯ ಕಾಳುಗಳನ್ನೆಲ್ಲಾ ಕಿತ್ತು, ಜತೆಗೆ ಕ್ಯಾರೆಟ್, ಮುಳ್ಳುಸೌತೆ, ಹೆಸರುಬೇಳೆ ಬೆರೆಸಿ ನಿಂಬೆಹುಳಿ ಉಪ್ಪು ಹಾಕಿ ಮಾಡಿದ ಕೋಸಂಬರಿಗೆ ಶುಂಠಿ ಹಾಕುವುದಕ್ಕುಂಟೋ ಇಲ್ಲವೋ ಎನ್ನುವ ಪ್ರಶ್ನೆಗೆ ಮನೆಯಲ್ಲಿ ಯಾರಲ್ಲೂ ಉತ್ತರವಿಲ್ಲದಿದ್ದಾಗ, ಇದ್ದರೂ ಇಲ್ಲದಿದ್ದರೂ ಹೊಸರುಚಿಯಾಗಲಿ, ಹಾಕುವುದು ಹಾಕುದೇ ಅಂತ ಕೊಚ್ಚಿ ಕೊಚ್ಚಿ ಶುಂಠಿಯನ್ನೂ ಬೆರೆಸಿದ್ದೆ, ತಂದಿದ್ದ ಕಾಲುಕೇಜಿ ಹಸಿಮೆಣಸಿನಲ್ಲಿ ಅದೃಷ್ಟವಂತ ಒಂದು ಮೆಣಸಿನಕಾಯಿಯನ್ನು ಹಿಡಿದು ಮಧ್ಯಾಹ್ನ ಹನ್ನೆರಡಕ್ಕೆ ಸರಿಯಾಗಿ ಹನ್ನೊಂದು ಬಾರಿ ಕೊಚ್ಚಿ ಹಾಕಿದ್ದೆ. ಊಟದ ರುಚಿ ಹೇಳಬೇಕೇ ! ಕೋಸಂಬರಿಗಂತೂ ಬೇಡಿಕೆಯೇ ಬೇಡಿಕೆ. ಹಿಂದಿನ ಜನ್ಮದಲ್ಲಿ ನಳಮಹಾರಾಜನ ಅಡುಗೆ ಮನೆಯಲ್ಲೇ ನಾನು ಅಡುಗೆ ಭಟ್ಟನಾಗಿದ್ದಿರಬೇಕು ಇಲ್ಲವಾದಲ್ಲಿ ಇಷ್ಟು ಅದ್ಭುತವಾಗಿ ಕೋಸಂಬರಿ ಮಡುವುದಕ್ಕೆ ಖಂಡಿತವಾಗಿಯೂ ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದೆ. ನನ್ನವಳು ಮಾಡಿದ್ದ ಬೀನ್ಸು, ಬಟಾಟೆ ಸಾಂಬಾರಿನ ಬಣ್ಣ ಮಾತ್ರ ಗಾಢವಾಗಿತ್ತು, ಕೋಸಂಬರಿಯ ಎದುರಿನಲ್ಲಿ ಸಾಂಬಾರಿನ ಕಳೆಗುಂದಿತ್ತು !

ಊಟದಬಳಿಕ ಕಾಲು ಚಾಚಿ ತುಸು ಕಣ್ಣಡ್ಡ(ನಿದ್ದೆ) ಮಾಡುವುದು ರಜಾದಿನದ ವಾಡಿಕೆ. ಹಾಗೆ ಬಿದ್ದುಕೊಂಡವನ ತಲೆಯಲ್ಲಿ ಕೋಸಂಬರಿಯ ಪ್ರಭಾವವೋ ಎನೋ ಓತಪ್ರೋತವಾಗಿ ವಿಷಯಗಳ ಪ್ರವಾಹವೇ ಹರಿದು ಬರುತ್ತಿತ್ತು. ಹತ್ತಿರ ಮಲಗಿದ್ದ ಇವಳ ಕಿವಿ ಕೊರೆಯುವುದಕ್ಕೆ ಪ್ರಾರಂಭಿಸಿದೆ.
"ಗೊತ್ತುಂಟೇನೇ ನಿನಗೆ , ಅನ್ನದಾನವೆಂಬುದು ಅತ್ಯಂತ ಶ್ರೇಷ್ಠ ದಾನವಂತೆ. ಇತರ ಯಾವುದೇ ವಸ್ತುವನ್ನೂ ಎಷ್ಟೇ ಪ್ರಮಾಣದಲ್ಲೂ ದಾನವನ್ನಾಗಿ ನೀಡಿದಲ್ಲಿ ಸ್ವೀಕರಿಸುವ ವ್ಯಕ್ತಿಗೆ ಸಾಕೆನಿಸಲಾರದಂತೆ. ಅದೇ ಅನ್ನದಾನ, ಅರ್ಥಾತ್ ಭೋಜನ ಮಾತ್ರ, ಒಬ್ಬ ವ್ಯಕ್ತಿ ಅವನ ಹೊಟ್ಟೆ ತುಂಬುವಲ್ಲಿಯವರೆಗೆ ಉಂಡಾನು ಮತ್ತೆ ಯಾರೇ ಆದರೂ ಸಾಕು ಎನ್ನಲೇಬೇಕು, ಅದು ಪ್ರಕೃತಿ ನಿಯಮ" ಎಂದೆ.

ಹೌದದು ಸರಿ ಸರಿ ಎಂದು ಹ್ನೂಗುಟ್ಟಿ ಕಣ್ಮುಚ್ಚಿ ಮಲಗಿದಳು....
ಹ್ ಇಷ್ಟು ಒಳ್ಳೆಯ ವಿಷಯಕ್ಕೆ ಎಷ್ಟು ನಿರ್ವಿಕಾರದಿಂದ ಎಷ್ಟು ಚಿಕ್ಕದಾಗಿ ಪ್ರತಿಕ್ರಿಯಿಸಿದ್ದಾಳೆ ಎನ್ನುವಷ್ಟರಲ್ಲಿ..

"ಅಲ್ಲಾ , ಅನ್ನದಾನ ಮಾತ್ರ ಶ್ರೇಷ್ಠ ದಾನವಾಗುವುದು ಹೇಗೆ. ಕನ್ಯಾದಾನವೂ ಶ್ರೇಷ್ಠ ದಾನವಲ್ಲವೇ ?" ಎಂದಳು
ಎಲಾ ಇವಳ ತಲೆಯೇ , ವಿಷಯ ಹೌದು, ನನ್ನ ತಲೆಗೆ ಹೊಳೆಯಲಿಲ್ಲವಲ್ಲ ಅಂದುಕೊಂಡೆ.

"ಹೌದಪ್ಪಾ ಹೌದು, ಕನ್ಯಾದಾನವೇ ಶ್ರೇಷ್ಠ ದಾನ ಯಾಕೆಂದರೆ ಅನ್ನದಾನ ಸ್ವೀಕರಿಸಿದವರು, "ಸಾಕು" ಎಂದು ಮಾತ್ರ ಹೇಳ್ತಾರೆ ಆದ್ರೆ ಗಂಡನಾದವ ಮಾತ್ರ, ಜೀವನ ಪೂರ್ತಿ "ಸಾಕಪ್ಪೋ ಸಾಕು" ಎಂದೇ ಹೇಳುವುದಲ್ಲವೇ" ಎಂದು ಹೇಳುವುದಕ್ಕೆ ಬಾಯಿ ತೆರೆದಿದ್ದವನ ಒಳಮನಸ್ಸು ಥಟ್ಟನೆ ಇನ್ಸೆಪ್ಶನ್ ಸಿನೆಮಾದಂತೆ ಹಲವಾರು ಪದರಗಳ ಹಿಂದು ಮುಂದಿನ ವಿಚಾರಗಳನ್ನು ತೋರಿಸಿ ಸ್ಟಾಪ್ ಸಿಗ್ನಲ್ ತೋರಿಸಿತ್ತು.

"ಹೌದು ಕಣೇ ಪ್ರೀತಿಯಿಂದ ಸಾಕಿ ಬೆಳೆಸಿದ ಮಗಳನ್ನೇ ತಂದೆಯಾದವ ಧಾರೆಯೆರೆದು ಕೊಡುತ್ತಾನೆ, ಅದಕ್ಕಿಂತ ಶ್ರೇಷ್ಠದಾನ ಬೇರೆ ಏನಾದೀತು... ನಿನ್ನನ್ನು ಹೆಂಡತಿಯಾಗಿ ಪಡೆದ ನಾನೇ ಧನ್ಯ" ಎಂದೆ... ನನ್ನವಳ ತುಟಿ ಕಿವಿಯ ಅಂಚಿನವರೆಗೆ ಬಂದು ನಿಂತಿತು, ದಂತಪಂಕ್ತಿಗಳ ನಡುವೆ ಪಳಕ್ಕನೆ ನಕ್ಷತ್ರವೊಂದು ಮಿನುಗಿ ಮರೆಯಾಯಿತು. ಹಾಗೆ ಕಣ್ಮುಚ್ಚಿ ಭುಜದ ಮೇಲೆ ತಲೆಯಿಟ್ಟು ಮಲಗಿದಳು.

ನಾನೂ ಕಣ್ಮುಚ್ಚಿ, ಬಾಯನ್ನೂ ಮುಚ್ಚಿ ಮಲಗಿದೆ...


ವಿಸೂ: ತಮಾಷೆಗಾಗಿ ಮಾತ್ರ, ಆದರೆ ಇಲ್ಲಿ ಕೊಟ್ಟಿರುವ ೯೦% ಘಟನೆಗಳು ನಿಜ ಮತ್ತು ೧೦% ಕಲ್ಪಿತ, ಬದುಕಿರುವ ಮತ್ತು ಇನ್ನೂ ಬದುಕಲಿರುವ ಎಲ್ಲಾ ಜೀವಿಗಳಿಗೆ ಗಂಡ,ಹೆಂಡತಿಯರಿಗೆ ಸಂಬಂಧಿತ...

Sunday, October 18, 2015

ಪ್ರಿಸನ್ ಬ್ರೇಕ್ : ರೋಚಕತೆಯ ಸುಳಿಯೊಳಗೆ

ಪ್ರಿಸನ್ ಬ್ರೇಕ್ ಎನ್ನುವ ಸೀರಿಯಲ್ ನ ಬೆನ್ನು ಹತ್ತಿದ್ದೆ. ಪ್ರತಿ ನಿಮಿಷಕ್ಕೂ ರೋಚಕತೆಯ ಬೆನ್ನು ಹತ್ತಿ ಕುತೂಹಲದ ಕೊಂಡಿಯನ್ನು ಪೋಣಿಸುತ್ತಾ ಸಾಗುವ ಕಥಾಹಂದರ. ನಿರಪರಾಧಿಯಾಗಿದ್ದರೂ ವ್ಯವಸ್ಥೆಯ ಕಾರಣದಿಂದಾಗಿ, ಪ್ರಭಾವಿ ರಾಜಕೀಯ ವ್ಯಕ್ತಿಗಳ ಚಾಣಾಕ್ಷ ತಂತ್ರಗಾರಿಕೆಯಿಂದಾಗಿ ಕುತಂತ್ರಕ್ಕೆ ಬಲಿಯಾಗಿ, ಮರಣದಂಡನೆಗೆ ದಿನಗಣನೆ ಮಾಡುತ್ತಿರುವ ತನ್ನ ಸಹೋದರನನ್ನು ರಕ್ಷಿಸುವುದಕ್ಕೋಸ್ಕರ ಸಾಮಾನ್ಯ ವ್ಯಕ್ತಿಯಾದ ಮೈಕಲ್ ಸ್ಕೋಫೀಲ್ಡ್ ತಾನೇ ಅಪರಾಧದ ಲೋಕಕ್ಕಿಳಿದು ಕಡುಪಾತಕಿಗಳಿರುವ ಜೈಲು ಸೇರುತ್ತಾನೆ. 
Photo: imdb site.


ಜೈಲಿನ ನಕ್ಷೆಯನ್ನು ತನ್ನ ಮೈಮೇಲೆ ಪೂರ್ತಿ ಹಚ್ಚೆಗಳಿಂದ ಬರೆಸಿರುತ್ತಾನೆ, ಯಾರಿಗೂ ತಿಳಿಯದಂತೆ ಅದ್ಭುತವಾದ ಚಿತ್ರವಿನ್ಯಾಸಗಳಿಂದ ನಕ್ಷೆಯನ್ನು ಅಡಗಿರಿಸಲಾಗಿರುತ್ತದೆ. ಬಾರಿಬಾರಿಗೂ ಎದುರಾಗುವ ಅಡೆತಡೆಗಳನ್ನು ತನ್ನ ಚಾಣಾಕ್ಷಮತಿಯಿಂದ ನಿಭಾಯಿಸುವ ಸ್ಕೋಫೀಲ್ಡ್ ಜತೆಗೆ ನಾವೂ ಇದ್ದಂತೆ ಭಾಸವಾಗುತ್ತದೆ. ಅಪರಾಧಿ ಜಗತ್ತಿನಲ್ಲಿಯೂ ಜೈಲಿನ ನಿಯಮಗಳು ಅವುಗಳನ್ನು ಮೀರುವ , ಒರೆಗೆ ಹಚ್ಚುವ ಖೈದಿಗಳು ಪರಸ್ಪರ ತಮ್ಮ ಜತೆಗಾರರಿಂದಲೇ ಹತ್ಯೆ/ಶಿಕ್ಷೆಗೆ ಒಳಗಾಗುವ ರೀತಿ, ಜೈಲಿನ ವಾರ್ಡರ್ ಗಳ ದಬ್ಬಾಳಿಕೆ, ಭ್ರಷ್ಟಾಚಾರ ಇವೆಲ್ಲವನ್ನೂ ಕಥಾಹಂದರದಲ್ಲಿ ಮಿಳಿತಗೊಳಿಸಿ ಅದ್ಭುತವಾಗುವಂತೆ ಚಿತ್ರಿಸಲಾಗಿದೆ. ಏನೇ ಆದರೂ ಅಪರಾಧಿಗಳ ಮಧ್ಯದಲ್ಲೇ ಇದ್ದರೂ ಸ್ಕೋಫೀಲ್ಡ್ ತನ್ನ ಚಾರಿತ್ರ್ಯವನ್ನು ಕಾಯ್ದುಕೊಳ್ಳುತ್ತಾನೆ, ಆ ನಿಟ್ಟಿನಲ್ಲಿ ಜೈಲಿನಿಂದ ಪರಾರಿಯಾಗುವ ಅಪರಾಧವನ್ನೆಸಗುತ್ತಿದ್ದರೂ ವ್ಯವಸ್ಥೆಯ ವಿರುದ್ಧ ಸಮರ ಸಾರುವ ನಾಯಕನ ಸ್ಥಾನದಲ್ಲಿ ನಿಂತು ಅನ್ಯಾಯದ ವಿರುದ್ಧ ಹೋರಾಡುತ್ತಾನೆ. ಸಾಹಸಮಯ ಚಿತ್ರಗಳನ್ನು, ಥ್ರಿಲ್ಲರ್ ಚಿತ್ರಗಳನ್ನು ಮೆಚ್ಚುವವರಾದಲ್ಲಿ , ನೀವೂ ಒಮ್ಮೆ ನೋಡಿ ಪ್ರಿಸನ್ ಬ್ರೇಕ್.
ಅಂದ ಹಾಗೆ ನಾನು ಹೇಳಿದ್ದು ಒಂದನೇ ಸೀಸನ್ ಬಗ್ಗೆ, ಪ್ರಿಸನ್ ಬ್ರೇಕ್ ನ ಒಂದನೇ ಸೀಸನ್ ನಲ್ಲಿ ೪೫ ನಿಮಿಷಗಳ 22 ಎಪಿಸೋಡ್ಗಳಿವೆ. 2005 ರಿಂದ 2009 ರ ವರೆಗೆ ನಾಲ್ಕು ಸೀಸನ್ ನಲ್ಲಿ ಪ್ರಿಸನ್ ಬ್ರೇಕ್ ಅಮೇರಿಕಾದಲ್ಲಿ ಪ್ರಸಾರವಾಗಿದೆ.

ಚಲನಚಿತ್ರಗಳ ಮಾಹಿತಿಕೋಶ IMDB ತಾಣದಲ್ಲಿ ಈ ಧಾರಾವಾಹಿಗೆ 8.5 ರ ಅಂಕಗಳು.
ಕಥೆ: ಪಾಲ್ ಶ್ಯೂರಿಂಗ್

Sunday, August 16, 2015

ಋಷ್ಯಮೂಕ:

ಋಷ್ಯಮೂಕ: ಆಲ್ಲಿಗೆ ಹೋದ ಋಷಿಗಳಿಗೆ ಅಜ್ಞಾನವು ನಿವಾರಣೆಯಾಗುವುದರಿಂದ
೨. ಎಲ್ಲಿ ಋಷ್ಯ ಎನ್ನುವ ಪ್ರಾಣಿಗಳು ಮೌನವಾಗಿರುತ್ತವೆಯೋ ಆ ಕಾರಣದಿಂದ
೩. ಎಲ್ಲಿ ಋಷಿಗಳು ಮೌನವಾಗಿ ತಪಸನ್ನು ಮಾಡುತ್ತಾರೋ ಆ ಕಾರಣದಿಂದ

ಆಧಾರ: ಭಾರತ ದರ್ಶನ ಗ್ರಂಥಮಾಲಿಕೆ - ರಾಮಾಯಣ

Wednesday, July 15, 2015

ಶೇರ್ ಇಟ್ ಎನ್ನುವ ಸಂಚಲನ...

ಶೇರ್ ಇಟ್ ಎನ್ನುವ ಸಂಚಲನ...
ಕಾಲವೊಂದಿತ್ತು ಒಂದು ಹಾಡನ್ನು ಹಂಚಿಕೊಳ್ಳುವುದಕ್ಕಾಗಿ ಮೊಬೈಲ್ ಗಳನ್ನು ಪರಸ್ಪರ ಜನುಮದ ಜೋಡಿಗಳಂತೆ, ಹತ್ತಿರ ಹಿಡಿದು ತುಂಬಾ ಹೊತ್ತು ಕಾಯಬೇಕಿತ್ತು.ಆಗ ಇನ್ಫ್ರಾರೆಡ್ ಎನ್ನುವ ತಂತ್ರಜ್ಞಾನದ ಬಳಕೆಯಾಗುತ್ತಿತ್ತು, ಆಮೇಲೆ ಬ್ಲೂಟೂಥ್ ಎನ್ನುವ ವ್ಯವಸ್ಥೆಯಿಂದಾಗಿ ಹಂಚುವಿಕೆ ಸರಳವಾಯಿತು.ಈಗಿನ ಬೆಳವಣಿಗೆ ಎಂದರೆ ಬ್ಲೂಟೂಥ್ ಗಿಂತಲೂ ವೇಗವಾಗಿ ಬೇಕಾದ್ದನ್ನು ಹಂಚಿಕೊಳ್ಳುವುದಕ್ಕಾಗಿ ಲಭ್ಯವಿರುವ ಶೇರ್ ಇಟ್(Share It) ಎನ್ನುವ ತಂತ್ರಾಂಶ. ಇದರ ಮೂಲಕವಾಗಿ ಗಣಕ-ಮೊಬೈಲ್-ಮೊಬೈಲ್ ಗಳ ನಡುವೆ, ಕಡತಗಳು, ಚಿತ್ರಗಳು, ವೀಡೀಯೋಗಳನ್ನು ಹಂಚಿಕೊಳ್ಳಬಹುದು, ಮಾತ್ರವಲ್ಲದೆ ತಂತ್ರಾಂಶಗಳನ್ನೂ ಹಂಚಿಕೊಳ್ಳಬಹುದು. ಉಚಿತವಾಗಿ ಲಭ್ಯವಿರುವ ಈ ತಂತ್ರಾಂಶ ಅತ್ಯಂತ ವೇಗವಾಗಿ ಮಾಹಿತಿಗಳನ್ನು ವಿನಿಮಯ ಮಾಡಬಲ್ಲದು. ನಿಮ್ಮ ಮೊಬೈಲ್ ನಲ್ಲಿ ವೈಫೈ ಮತ್ತು ಹಾಟ್ ಸ್ಪಾಟ್ ತಂತ್ರಜ್ಞಾನದ ಲಭ್ಯತೆಯಿದ್ದಲ್ಲಿ ಈ ತಂತ್ರಾಂಶವನ್ನು ಉಪಯೋಗಿಸಿಕೊಳ್ಳಬಹುದು. ಈ ತಂತ್ರಾಂಶವನ್ನು ಉಪಯೋಗಿಸುವುದಕ್ಕೆ ಇಂಟರ್ನೆಟ್ ನ ಅವಶ್ಯಕತೆಯಿಲ್ಲ. ನಿಮ್ಮ ಗೆಳೆಯನ ಫೋನ್ ನಲ್ಲಿ ಈ ತಂತ್ರಾಂಶ ಲಭ್ಯವಿಲ್ಲದಿದ್ದಲ್ಲಿ ಬ್ಲೂಟೂಥ್ ಮೂಲಕ ಆ ಮೊಬೈಲ್ ಗೆ ತಂತ್ರಾಂಶವನ್ನು ರವಾನಿಸುವ ವ್ಯವಸ್ಥೆ ಈ ತಂತ್ರಾಂಶದಲ್ಲಿ ಲಭ್ಯವಿದೆ. ಹೊಸ ಮೊಬೈಲ್ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳಿ ನಿಮ್ಮ ಗೆಳೆಯನ ಮೊಬೈಲ್ ನಲ್ಲಿರುವ ಹಲವಾರು ತಂತ್ರಾಂಶಗಳನ್ನು ನಿಮಿಷ ಮಾತ್ರಗಳಲ್ಲಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳಬಹುದು, ಚಿತ್ರ, ಹಾಡು ಇತ್ಯಾದಿಗಳನ್ನು ಹಂಚಿಕೊಳ್ಳಬಹುದು. ಇದುವರೆಗೆ ಬಳಸಿಲ್ಲವಾದಲ್ಲಿ ಒಮ್ಮೆ ಬಳಸಿನೋಡಿ, ಹೇಗಿದೆ ಹೇಳಿ. ಆಂಡ್ರಾಯ್ಡ್ , ವಿಂಡೋಸ್ ಮತ್ತು ಐ ಓ ಎಸ್ ನ ಸಹಾಯದಿಂದ ನಡೆಯುವ ಸಾಧನಗಳಿಗೆ ಈ ತಂತ್ರಾಂಶ ಲಭ್ಯವಿದೆ ಜತೆಗೆ ವಿಂಡೋಸ್ ಗಣಕದ ಸಂಚಾಲನಾ ವ್ಯವಸ್ಥೆಗೂ ಈ ತಂತ್ರಾಂಶ ಲಭ್ಯವಿದೆ. ಶೇರ್ ಇಟ್ ಮೂಲಕ ಐವತ್ತು ಮೀಟರ್ ಅಂತರದಲ್ಲಿದ್ದರೂ ಸಾಧನಗಳನ್ನ್ನು ಸಂಪರ್ಕಿಸಬಹುದಂತೆ.

ಈ App ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೋಡಿ - http://shareit.lenovo.com/
ಮೊಬೈಲ್ ನಲ್ಲಿ ಅನುಸ್ಥಾಪಿಸಿ - http://bit.ly/13GyDk5
ಲ.ನಾ.ಭಟ್

Sunday, July 12, 2015

ದೃಷ್ಟಿ

ಒಂದು ಮರವಿದ್ದಲ್ಲಿ, ಒಬ್ಬ ಅದರ ತೊಗಟೆಯನ್ನು ಮುಟ್ಟಿ ಇದು ಬಹಳ ಕಠಿಣವಾಗಿದೆ ಎನ್ನುತ್ತಾನೆ, ಇನ್ನೊಬ್ಬ ಅದರ ಎಲೆಯನ್ನು ನೋಡಿ ಹೂವನ್ನು ನೋಡಿ, ಆಹಾ ಸುಂದರವಾಗಿದೆ ಎನ್ನುತ್ತಾನೆ, ಇನ್ನೊಬ್ಬ ಅದರ ಹಣ್ಣು ತಿಂದು ಕಹಿಯೋ/ಸಿಹಿಯೋ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸ್ತಾನೆ. ಮತ್ತೊಬ್ಬ ಅದರ ಗೆಲ್ಲಿನ ತುಂಡನ್ನು ಸೌದೆ ಮಾಡಿ, ಓ ಒಳ್ಳೆಯ ಉರುವಲು ಅಥವಾ ಪ್ರಯೋಜನಕ್ಕಿಲ್ಲದ ಮರ ಎನ್ನಬಹುದು. ಅವರವರಿಗೆ ಬೇಕಾದ ಅಂಶವನ್ನು ಅಥವಾ ಗುಣವನ್ನು ಮಾತ್ರ ಗಮಸಿರುತ್ತಾರೆ. ಆದರೆ ಎಲ್ಲಾ ಲಕ್ಷಣಗಳನ್ನು ಯಾರು ಸಂಪೂರ್ಣವಾಗಿ ಗಮನಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದು ಮಾತ್ರ ಸರಿಯಾಗಿರ್ತದೆ. ನಮ್ಮ ಜೀವನವೂ ಹೀಗೇ ಅಲ್ವೇ ?
 ------------------------------------------------
ಓರ್ವ ವ್ಯಕ್ತಿಯನ್ನು ಹೊಗಳುವುದಕ್ಕೆ ಮೊದಲು ಹೆಚ್ಚು ಯೋಚಿಸಬೇಕೆಂದಿಲ್ಲ, ಆದರೆ ಯಾರನ್ನಾದರೂ ದೂಷಿಸಬೇಕೆಂದಿದ್ದರೆ ಸಾವಿರ ಬಾರಿ ಯೋಚಿಸು, ಆ ವ್ಯಕ್ತಿಯಲ್ಲಿ ಹೊಗಳುವಂತಹಾ ಒಂದೂ ಗುಣವಿಲ್ಲದಿದ್ದಲ್ಲಿ ಆ ಮೇಲೆ ದೂಷಿಸು.... 

ನಿಮ್ಮ ಅಭಿಪ್ರಾಯ