Tuesday, October 23, 2007

ಬಯಲಾಟ


ಎಷ್ಟೊಂದು ಜನ ಬರುತ್ತಾರೆ ಹೋಗುತ್ತಾರೆ
ಮುದುಕರು ,ಮಕ್ಕಳು,ಗೆಳೆಯರು,ಎಳೆಯರು
ಹಿರಿಯರು ಗಣ್ಯರು ಧನಿಕರು ಬಡವರು
ಪಟ್ಟಿ ಉದ್ದ ಬೆಳೆಯುತ್ತದೆ ಹೀಗೆಯೇ

ಬರದವರು ಬಹುಶಹ ಯಾರೂ ಇಲ್ಲ
ಒಮ್ಮೆ ಬಂದವರು ಹಲವು ನೆನಪುಗಳ
ಹೊತ್ತೇ ಹಿಂದೆ ನಡೆಯುತ್ತಾರೆ
ರಂಗದ ಧೂಳು ಹಾರಿಸುವ ಕಲಾವಿದರ ಕಾಣುತ್ತಾರೆ


ಇವನದ್ದು ಯಾವತ್ತೂ ಒಂದು ವೇಷವಿದೆ
ಕಿರೀಟ ಧರಿಸಿ ರಾತ್ರಿಯೆಲ್ಲಾ ಮಿನುಗುತ್ತಾನೆ
ನಕ್ಷತ್ರ ಕೂಡಾ ಕಾಣದಾಗುತ್ತದೆ ಇವನ
ಪೌರುಷದ ನಡೆಗಳ ಮಿಣುಕಿನಲ್ಲಿ


ಚೆಂಡೆಯಣ್ಣ ರಡ್ಡೀಂಗಣ ಬಾರಿಸುತ್ತಲೇ ಇರುತ್ತಾನೆ
ಮದ್ದಳೆಯಾತ ತಾಂ ತೋಂ ನುಡಿಸುತ್ತಲೇ ಇರುತ್ತಾನೆ
ಕೋಡಂಗಿಯಾಗಲಿ ಬಣ್ಣದವನಾಗಲಿ ನಮಸ್ಕರಿಸಿಯೇ ಬರುತ್ತಾನೆ
ಪಾತ್ರ ಬದಲಾಗಬಹುದು ಆದರೆ ಬಯಲು ಅದೇ ಅಲ್ಲವೆ

ಯಾರೇ ಬರಲಿ ಬಿಡಲಿ ಬಯಲಾಟ ನಿಲ್ಲದು
ಯಾರಿಗೂ ಕಾಯದು ಚಲಿಸುವ ಕಾಲದಂತೆ
ರಾವಣ ಸಾಯಲೇ ಬೇಕು ರಾಮ ಗೆಲ್ಲಲೇ ಬೇಕು
ದಮಯಂತಿ ನಳನಿಗೇ ದಕ್ಕುತ್ತಾಳೆ ಪುಷ್ಕರ ಮಣ್ಣು ಮುಕ್ಕುತ್ತಾನೆ

ಕಡ್ಲೆಪುರಿ ಚುರುಮುರಿ ಮಾರುವವರೂ ಸೆಳೆಯುತ್ತಾರೆ
ರಾಳದ ಬೆಂಕಿಗೆ ಬಿದ್ದ ಕೀಟಗಳ ಲೆಕ್ಕವುಂಟೆ
ಕನಸಿನಲ್ಲಿ ಆಟ ನೋಡುತ್ತಿದ್ದವನ ಎದುರಲ್ಲಿ ರಕ್ಕಸ
ಉಚ್ಚೆ ಹುಯ್ದುಕೊಂಡು ಓಡುವುದೊಂದೇ ಬಾಕಿ

ಕೇಕೆಗೆ ಉಬ್ಬುತ್ತಾರೆ ಶಿಳ್ಳೆಗೆ ಹಿಗ್ಗುತ್ತಾರೆ
ರಾತ್ರಿಯೆಲ್ಲಾ ಲೋಕವನ್ನೇ ಮರೆಯುತ್ತಾರೆ ನಿಮ್ಮನ್ನೂ ಮರೆಸುತ್ತಾರೆ
ಆಟ ಮುಗಿದ ಬಳಿಕ ಒಂದೆ ವಾರ ಮಾತು ಚರ್ಚೆ
ಮತ್ಯಾರಿಗೂ ನೆನಪಿಲ್ಲ ಎಲ್ಲವನ್ನೂ ಮರೆಯುತ್ತಾರೆ

ಬದುಕೂ ಅಂತೇ ಅಲ್ಲವೇ ಇಂದಿರುತ್ತೇವೆ
ನಾಳೆ ಇರಬಹುದೆಂಬ ಆಶೆ ಮಾತ್ರ
ಬದುಕಿರುವ ತನಕ ತಲೆಯೆತ್ತಿ ಕುಣಿಯಬೇಕು
ನಾಳೆ ಯಾರು ನೆನಪಿಟ್ಟು ಏನಾಗಬೇಕಾಗಿದೆ ?

ಬದುಕಲ್ಲಿ ಸಿಗಬಹುದು ಶರಧಿ
ಸೇತುವೆ ಕಟ್ಟಲು ರಾಮ ಬರಲಿಕ್ಕಿಲ್ಲ
ರಾಮ ಮೂರ್ತಿ ಮಾತ್ರ ,ಆಕೃತಿಯಲ್ಲವಲ್ಲ ....
ಕಟ್ಟಿ ಕೊನೆಮುಟ್ಟುವ ವರೆಗೆ ಕಟ್ಟುವುದೊಂದೇ ಕೆಲಸ

ಬಯಲಾಟ ಒಂದು ರಾತ್ರಿಯಲ್ಲಿ ಮುಗಿದಿರುತ್ತದೆ
ಮಳೆ ಬಂದರೆ ಇನ್ನಷ್ಟು ಬೇಗ ಮುಗಿವುದರ ಮೊದಲೇ
ಬದುಕೂ ಹಾಗೆಯೇ ಮಳೆ ಹೇಳದೇ ಬಂದೀತು
ಮಳೆ ಬರುವುದಕ್ಕೆ ಮೊದಲು ಪ್ರಯತ್ನ ಮುಗಿಸಲಿಕ್ಕೆ ಪ್ರಸಂಗ

೨೨.೧೦.೨೦೦೭

Sunday, October 21, 2007

ಲಭ ಪರಲೋಕ ಯಾತ್ರೆ

ಬೇಡ ಬೇಡಿರಿ ಬಿಡಿರಿ ನನ್ನನು
ಬದುಕಗೊಡಿ ಇನ್ನೊಂದೈವತ್ತು ವರುಷ
ತೆರದಿ ಹಲುಬಿದ ಎನ್ನ ಆತ್ಮನ ಕ್ಷಣದಿ ಪಿಡಿದರು ಮರುಗದೆ
ದರದರನೆ ಎಳೆಯುತ ಕಾಲ್ಗಳಲಿ ಪಿಡಿದೊಯ್ದರೆಳೆಯುತ ನಾಲ್ವರು

ಕತ್ತಿಕೊಟ್ಟು ಪಿಕ್ಕಾಸುಗಳನೇ ಪಿಡಿದಿಹರಾಯುಧದ ತೆರದಲಿ ದೈತ್ಯರು
ಗಹಗಹಿಸಿ ನಗುತ ಗುರ್ ಗುರ್ರೆನ್ನುತ ಕೋರೆ ಹಲ್ಗಳ ಮಸೆವರು
ಬಾಯಬಿಡೆ ದುರ್ನಾತ ರಾಚಲು ಮೂಗ ಕೈಯಲಿ ಮುಚ್ಚಿದೆ
ಕೈಯ ಕೂಡಲೆ ಕಟ್ಟಿಬಿಟ್ಟರು ಬೇಲಿ ಮುಳ್ಳಲಿ ಹರಿತದ

ಯಾಕೆ ವಾಸನೆ ಪೇಸ್ಟು ಸಿಗದೇ ನಿಮ್ಮ ಲೋಕದಿ ಕೇಳಿದೆ
ಮುಖ ಮುಖ ನೋಡುತವರಲೆ ಸನ್ನೆಗಳ ಹಲ ಗೈದರು
ಯೋಚನೆಯ ನೀವ್ ಮಾಡಬೇಡಿರಿ ಸನಿಹದಲ್ಲೆ ಅಂಗಡಿ ಇರುವುದು
ಕ್ಷಣಗಳೆರಡು ಬಿಟ್ಟರೆನ್ನನು ತಂದು ಕೊಡುವೆ ಪೇಸ್ಟನು

ಅವರಿಗರ್ಥವೆ ಆಗಲಿಲ್ಲ ಎನ್ನ ಬಂಧನ ಕಳಚಲಿಲ್ಲ
ಹಕ್ಕಿಗಳು ಆಕಾಶ ಮಾರ್ಗದಿ ಎನ್ನ ನೋಡುತ ನಗುತ ಪೋದವು
ಲನಾ ಭಟ್ಟನು ಹೋಪ ಚಂದವ ನೋಡಿರೆನ್ನುತ ಕೂಗಿ ಕರೆಯುತ
ಕಾಗೆ ಕೂಡಾ ಕಾಕ ಎನ್ನುತ ಬೈ ಬೈ ಟಾಟಾ ಮಾಡಿತು

ವಿಕ್ಕಿಮಾಪಿಯದಲ್ಲಿ ಕಂಡತೆರನೇ ಭೂಮಿ ಎನಗೆ ಕಂಡಿತು
ತಿರುಗುತಿರುವಾಗ ಎಡೆಯಲಿ ಅಮೇರಿಕಾವೂ ಕಂಡಿತು
ಕೊನೆಯ ನೋಟವು ಬಳಿಕ ಭೂಮಿಯು ಚಿಕ್ಕ ಉಂಡೆಯೆ ಆದುದು
ಕತ್ತಲೆಯ ಮಾರ್ಗದಲ್ಲಿ ಎನನು ಎಲ್ಲೊ ಎಳೆಯುತ ಹೋದರು

ಕಣ್ಣ ಮುಚ್ಚಿದೆ ಭಯದಿ ಕಿರುಚುತ ದೈತ್ಯ ಕರಿಯರ ಕೈಯಲಿ
ಎಳೆದೊಯ್ದು ಎಸೆದರು ಕೊನೆಗೆ ಎನ್ನನು ಓರ್ವ ದೊಡ್ಡವ ಎದುರಲಿ
ಮೈ ಕೈಯಲೆಲ್ಲಾ ಅಪ್ಪ ಎದ್ದಿದೆ ಮಸಿಗಿಂತ ಕರಿಕರಿ ಬಣ್ಣವು
ಕೈಯಲೊಂದು ಗುದಿಗೆ ಹಿಡಿದಿಹ ಗಹಗಹಿಸಿ ನಗುತಿಹ ಹಾಸ್ಯದಿ

ಜತೆಗೆ ಓರ್ವನು ಕುಳ್ಳ ನಿಂತಿಹ ಎನೋ ಲೆಕ್ಕವ ಮಾಡುತ
ಕೈ ಕಾಲ್ಬೆರಳುಗಳ ಕೂಡಿ ಕಳೆದು ಕೊನೆಗೆ ಏನನೊ ಹೇಳಿದ
ನಾನು ಮಾತ್ರವೆ ಅಲ್ಲ ಲೆಕ್ಕದಿ ದಡ್ಡ ಇವ ನನಗಿಂತಲೂ
ಎನುತ ಮನದಲಿ ನಗುತಲಿರೆ ಅವ ಓರೆ ಕಣ್ಣಲಿ ನೋಡಿದ

ಹೊಟ್ಟೆ ಚುರುಚುರು ಎಂಬ ಶಬ್ದವ ಹಸಿವೆಯಲಿ ಶುರು ಮಾಡಿತು
ತಿನಲು ಏನಾದರೂ ಸಿಗುವುದೆ ಎನುತ ಕೇಳಲು ಬಯಸಿದೆ
ಅಷ್ಟರೊಳಗೆ ಧಡಿಯ ಅವರಿಗೆ ಏನೋ ಸಂಜ್ನೆಯ ಮಾಡಿದ
ನಾಲ್ವರೆನ್ನಯ ಕಾಲ ಬಿಟ್ಟು ತಲೆಕೂದಲಿಗೆ ಕೈಯನು ಇಟ್ಟರು

ಸತ್ತ ನಾಯಿಯ ಕಾರ್ಪೊರೇಷನ್ ಆಳುಗಳೆಳೆದೊಯ್ವ ತೆರದಲಿ
ಮೊಣಕಾಲ್ವರೆಗೆ ಬಂದಿಹ ನಾತ ನೀರಲಿ ಹೇಸದೇ ಎಳೆದೊಯ್ದರು
ಅಯ್ಯೊ ಹಾಹಾ ಏನ ಗೈವಿರಿ ಎನಲು ಬಾಯನು ತೆರೆಯಲು
ಫಳಫಳ ಹೊಳೆವ ಮುಳ್ಳಿನ ಉಂಡೆ ತುರುಕಿಸಿ ಬಾಯ ಮುಚ್ಚಿದರಾಗಲೆ

ನಾನೊಬ್ಬನೇ ಬಂದಿಹೆ ಬಹಳ ಕಷ್ಟ ಹೇಗೆ ಸಮಯವ ಕಳೆಯಲಿ
ಕಂಡರಾಗಲೆ ಹಲವು ಜನ ನನಗಿಂತ ಮೊದಲೇ ಬಂದವರ್
ನನ್ನ ಕಾಣುತ ಕೆಲರು ನಗುತಲಿ ಕೇಕೆ ಹಾಕುತ ಕುಣಿದರು
ಇನ್ನು ಕೆಲವರು ಅಯ್ಯೊ ಪಾಪ ಬಂದಿಹನಿವ ಎಷ್ಟು ಬೇಗನೆ ಎಂದರು

ಯಾಕಯ್ಯಾ ನನ್ನನು ಇಲ್ಲಿ ತಂದಿರಿ ಯಾವ ತಪ್ಪಿಗೆ ಶಿಕ್ಷೆಯು
ಎಂದು ಕೇಳಲು ಬಾಯೊಳಿಹ ಉಂಡೆ ಬಿಡುವುದೆ ಚುಚ್ಚದೆ
ಇನ್ನು ಹಲವರ ಕಾಣುತಿಹೆ ನಾ ವಸ್ತ್ರ ಹೀನರು ಮನುಜರು
ಕಚ್ಚಿ ತಿನ್ನುತ ಒಬ್ಬರೊಬ್ಬರ ಹಸಿವೆ ತಡೆಯದೆ ಕ್ರೌರ್ಯದಿ


ಕುದಿಕುದಿ ಎಣ್ಣೆ ಬಾಣಲೆಯೊಳಗೆ ಎಸೆದರು ಸೇರಿ ಹಲವರು ಓರ್ವನ
ಉರಿವ ಬೆಂಕಿಯ ಮೇಲೆ ಇನ್ನೋರ್ವ ತಲೆ ಕೆಳಗಾಗಿಹ
ಬೇರೆ ಇನ್ನಿನ್ನೇನೊ ಮಾಳ್ಪರು ಹೇಗೆ ಹೇಳಲಿ ನಾಚದೆ
ಸತ್ತ ಮೇಲೂ ಉಳಿದಿಹುದೆ ಎನ್ನಲಿ ಇನ್ನು ಹೋಗದೆ ಏತಕೆ ?

ಅಯ್ಯೊ ರಾಮ ನನ್ನನಿನ್ನೇನು ಮಾಳ್ಪರೊ ಅಧಮರು
ಎನುತ ಮುಂದುವರಿಯುತಿರೆ ನಾಲಗೆಗೆ ಬಂದಿಹ ಶ್ರೀಹರಿ
ಕೊನೆಯ ಕ್ಷಣದ ಸೂತ್ರ ಪಠಣದ ತೆರದಿ ಶ್ಲೋಕದ ಸಾಲ್ಗಳು
ರಪರಪನೆ ಕುಣಿದಿವೆ ನಾಲಗೆಯ ಮೇಲೆ ಬಹು ಹಿಂದೆ ಮರೆತಿದ್ದವುಗಳು

ಕೈಯಲೀರ್ವರು ಕಾಲಲೀರ್ವರು ಪಿಡಿದು ಆಳದ ಹಳ್ಳಕೆ
ಎಸೆಯಲೆನ್ನನು ಉಯ್ಯಾಲೆ ತೂಗುತ ಕುಯ್ಯೊ ಕುಯ್ಯೊ ಕೂಗ್ವರು
ಮೀನು,ಮೊಸಳೆಗಳಾದಿ ಯಾಗಿ ದೈತ್ಯಗಾತ್ರದ ಹಾವ್ಗಳು
ಜತೆಗೆ ಸೇರುತ ಬಾಯ ಹಿಗ್ಗಿಸಿ ನಾನು ಬೀಳ್ವುದ ಕಾಯ್ವವು

ನಾಲ್ವರೆನ್ನನು ಜತೆಗೆ ತೂಗಿ ಕೊನೆಗೆ ಕೈಗಳ ಬಿಟ್ಟರು
ಬೀಳಬೇಕಿನ್ನೇನು ಕ್ಷಣದಲಿ ಸಿಕ್ಕಿದೆ ಪುಣ್ಯ ಮರದೊಂದು ಕೊಂಬೆಯು
ಸತ್ಕಾರ್ಯದ ಗಾಳಿ ಬೀಸುತ ಮರವದೆನ್ನ ಕಡೆಗೆ ಬಾಗಿತು
ಸ್ವಪ್ನದಿ ಜಾರಿ ಮಂಚದ ಕರೆಯ ಹಿಡಿದು ಕೂಗಿದೆ

ಏನೆಂದಪ್ಪ ಓಡುತ ಬಂದು ಎನ್ನನು ವಾಸ್ತವದ ಲೋಕಕೆ ತಂದರು
ಸಧ್ಯ ಬದುಕಿದೆ ಮಂಚದಿಂದ ಕೆಳಗೆ ಬಿದ್ದದ್ದಷ್ಟೆಯೋ !:D
ಹೊದಿಕೆ ಸರಿಸಿ ಚಾಪೆ ಮಡಿಸಿ ಕಣ್ಣನುಜ್ಜುತ ಎದ್ದೆನು
ಸ್ವಪ್ನ ಯಾತ್ರೆಯ ಕಹಿಯ ಕನಲುತ ಸ್ನಾನ ಗೃಹಕೆ ನಡೆದೆನು

21.10.2007

Wednesday, October 17, 2007

ನೀರವತೆ-ರಾತ್ರಿ-ಇರುಳು

ಅರ್ಥವಿಲ್ಲದಿರಬಹುದು ಲೋಕಕ್ಕೆ
ರಾತ್ರಿಯ ಅಲೌಕಿಕ ಭಾವದೊಳಗೆ
ಎಷ್ಟೊಂದು ವಿಧದ ಆರ್ದ್ರ ಭಾವಗಳು
ನಿಶ್ಶಬ್ದದೊಳಗಿನ ಶಬ್ದದೊಳಗೆ

ಭಾವವಿಲ್ಲದಿಹ ಭಾವಗಳು ಬೆಸೆಯಬಲ್ಲವು ರಾತ್ರಿಗಳ
ರಹಸ್ಯಗಳ ಮಣಿಗಳು ರಾತ್ರಿಮಾಲೆಯ ಹೆಣೆದಿಹವು
ಸ್ಥಿರವಾಗಿ ಚಲಿಸುತ್ತಿಹ ಮನ ಚಲಿಸುತ್ತಲಿ ಸ್ಥಿರವೂ ಅಹುದು
ಎನೇನೋ ದ್ವಂದ್ವಗಳು ಬರಿ ಎರಡಲ್ಲ

ಮುಗಿಲ್ಮುಟ್ಟಿದೆ ಮೋಟು ಮುದಿನಾಯಿಯ ಕೂಗು
ಜತೆ ಸೇರಿದೆ ಕೊನೇ ಮೋಟಾರಿನ ಎಂಜಿನ್ನಿನ ಕಿರ್ರು
ಝೀರುಂಡೆಯ ಝೀ ಎನ್ನುವ ಝೇಂಕಾರದ ಝಿಲ್ಲು
ಶಬ್ದವೇಧಿಗೆ ತೊಡಗಿಹ ಕರಿ ಬಾವಲಿಗಳ ಶಿಳ್ಳು

ಮುಂಜಾವಿನ ವೇಳೆಗೆ ಆಭರಣದ ತೆರ ಭುವಿಯನ್ನು
ಆವರಿಸಲು ಮಂಜಿನ ಹನಿ ಅವಸರಿಸದೆ ಬರುತಿಹನು
ತಂಗಾಳಿಯು ಬರೆಯುತ್ತಿಹ ನೀರವತೆಯ ಭಾಷ್ಯ್ತ
ಚುಂಬಿಸುತಲಿ ಗಿಡಮರಗಳ ಚಿಗುರನು ಕೆಣಕಿಹನು

ಕೊನೆಬೀದಿಯ ಕಡೆಯಿಂದಲಿ ಪಹರೆಯ ಸೀಟಿ
ಏಕಾಂತವ ಅನುಭವಿಸುತ್ತಿದೆ ಇರುಳಲಿ ಬಡ ರಸ್ತೆಗಳು
ಕನಲುತ್ತಲಿ ತಾ ಪಡೆದಿಹ ಇನಿಯಳ ಸಿಹಿಮುತ್ತನ್ನು
ಕಾದಿಹನಿವ ಕನಸಿನ ಬೀದಿಯೊಳಾಕೆಯ ಬರವನ್ನು


ಎಲೆಮರಗಳು ಸಹ ಸದ್ದಿಲ್ಲದೆ ನಿದ್ದೆಗೆ ಸರಿದಿಹವು
ಜಗಬೆಳಗುತ ಎಂದಿನ ತೆರ ದೀಪದ ಕಂಭಗಳು
ಕ್ರಿಮಿಕೀಟಗಳೂ ಮಂಡೂಕಗಳೂ ಸಭೆ ಜಂಟಿಯ ಕರೆದಿಹವು
ಕಿರ್ರ್ ಕಿರ್ರೆನ್ನುತ ಟರ್ರ್ ಟರ್ರೆನ್ನುತ ಸಭೆ ರಂಗೇರಿಹುದು



ಮೋಡಗಳೆಡೆಯಿಂದಲಿ ಶಶಿ ಬಾಂದಳದಲಿ ನಿಂದು
ಭುವಿ ಮಲಗಿರುವುದ ಕಾಣುತ್ತಲೆ ಮುದಗೊಂಡಿಹನಿಂದು
ಮೂರ್ಲೋಕವೆ ನಿದ್ರೆಯ ಸವಿಯೊಳುಮಲಗಿರಲು
ನೀರವತೆಯು ಕಾಡಿರುವನು ಇರುಳನು ಯಾಕಿಂದು ?!

ಇದೇ ರೀತಿಯ ಇನ್ನೊಂದು ಕವನಕ್ಕೆ ಇಲ್ಲಿ ಬನ್ನಿ

Thursday, May 31, 2007

ಭಾಗ ೨

ಹನುಮಂತನ ಪರಿಚಯ ನಿಮಗಾಗಬೇಕೆಂದರೆ ನಮ್ಮ ವೇದಪಾಠ ಶಾಲೆಯ location ನಿಮಗೆ ಗೊತ್ತಾಗಬೇಕು.ಸುಬ್ರಹ್ಮಣ್ಯ ದೇಗುಲದ ಗೋಪುರದ ಎದುರು
ಎಡಭಾಗದಲ್ಲಿ ಛತ್ರವಿದೆ ಅದರ ಹೊರಾಂಗಣ ಬಹಳ ವಿಶಾಲವಾಗಿದೆ.ರಥಬೀದಿಯ ಮುಕ್ಕಾಲು ಪಾಲು ಉದ್ದವಿದೆ.ದೇಗುಲದ ಕಡೆಗೆ ಮುಖ ಮಾಡಿ ನಿಂತರೆ ಎಡಗಡೆಗೆ.
ಉತ್ತರಾದಿ ಮಠವೆಂದು ಕರೆಯಲ್ಪಡುವ ಒಂದು Sub ದೇವಸ್ಥಾನವಿದೆ.ಅಲ್ಲಿ ನಡೆಯುತ್ತಿತ್ತು ನಮ್ಮವೇದಪಾಠ ಶಾಲೆ.ಇಲದು ಒಂದು ಪುರಾತನ (:D ಬಹುಶಹ) ಹನುಮಂತನ ಗುಡಿ.
ಬೆಳಗ್ಗೆ ಪ್ರತೀದಿನ ೭-೭.೩೦ ರವರೆಗೆ
ಓರ್ವರು ಪುರೋಹಿತರು ಬಂದು ಹನುಮಂತನ ಜತೆ ಸ್ವಲ್ಪ ಹೊತ್ತು ಇದ್ದು(ಪೂಜೆ ಮಾಡಿ)ಹೋಗುತ್ತಿದ್ದರು.ಅವರು ಬರುತ್ತಿದ್ದುದು ಕೆಲವೊಮ್ಮೆ ನಮಗೆ ತಿಳಿಯುತ್ತಲೇ ಇರಲಿಲ್ಲ.
ಇರಲಿ ಬಿಡಿ .. ಸುಮಾರು ೫ ವರೆ ಅಡಿ ಎತ್ತರ ಸಾಧಾರಣ ಮೈಕಟ್ಟು ಎಣ್ಣೆಗೆಂಪು ಮೈಬಣ್ಣ :D ಕಿವಿಯಲ್ಲಿ ಒಂದು ಓಲೆಯಿತ್ತು,ಎರಡೂ ಕಿವಿಗಳಲ್ಲೋ ಒಂದರಲ್ಲೋ ಎಂದು ನೆನಪಿಲ್ಲ.ಯಾರೊಂದಿಗೂ ಅವರು(ಪುರೋಹಿತರು) ಮಾತಾಡಿದ್ದನ್ನು ನಾನು ಆ ಮೂರು ವರ್ಷಗಳಲ್ಲಿ ನೋಡಲಿಲ್ಲ.
ಅವರಾಯಿತು ಅವರ ಕೆಲಸವಾಯಿತು ಎಂದಿರಬಹುದೋ ಅಥವಾ ಈ ಪಿಳ್ಳೆಗಳೊಂದಿಗೆ ಎಂತ ಮಾತಾಡುವುದು ಎಂಬ ಭಾವವಿದ್ದಿರಬಹುದೋ ಎನೋ.ಬಿಳಿ ಬಣ್ಣದ ಸುಮಾರು ೧೦-೧೫
ದೊಡ್ಡ ಹೂಗಳನ್ನು ದಿನಾಲೂ ತರುತ್ತಿದ್ದರು ಹನುಮಂತನ ಸಂದಿಗೊಂದುಗಳಲ್ಲೆಲ್ಲಾ ಒಂದೊಂದು ಹೂ ಸಿಕ್ಕಿಸಿ ಗಂಧ ಮೆತ್ತಿ ಆರತಿ ಎತ್ತಿದಾಗ ಪೂಜೆ ಮುಗಿಯುತ್ತಿತ್ತು.ಅದಕ್ಕಿಂತ ಮೊದಲು ಪಾಪ ಹನುಮನಿಗೆ ತಣ್ಣೀರಿಂದ ಪುಟ್ಟ ಸ್ನಾನ.
ಗುಡಿಯ ಹೊರಗೆ ಇದ್ದ್ದ ಘಂಟೆಗಳನ್ನು ಎಳೆಯುವುದಕ್ಕೆ ನಮ್ಮ ಪೈಪೋಟಿ ಕಂಡು ಹನುಮಂತನಿಗೆ ನಗು ಬಂದಿರಬಹುದೋ ಏನೋ !.ಇನ್ನು ಪೂಜೆಯಬಳಿಕ ಒಂದೊಂದು ಚಿಕ್ಕ ಚಿಕ್ಕ ಗಂಧದ ಉಂಡೆಗಳು ನಮ್ಮ ಕೈಮೇಲೆ ಬೀಳುತ್ತಿದ್ದವು.
ಯಾಕೋ ಏನೋ ಹೂಗಳೆಲ್ಲಾ ಹನುಮಂತನಿಗೆ ಮಾತ್ರ ಸೀಮಿತವಾಗಿದ್ದವು.ಭಡಾಲ್ ಎಂದು ಗುಡಿಯಲ್ಲಿ ಹನುಮಂತನನ್ನು ಭಂದಿಸಿ ಅರೆ ಕ್ಷಣದಲ್ಲಿ ಮಾಯವಾಗಿಬಿಡುತ್ತಿದ್ದರು.ಮತ್ತೆ ಪಾಪ ಹನುಮಂತನ ದರುಶನ ಮರುದಿನ ಬೆಳಗ್ಗೆಯೇ ಕೆಲವೇಕೆಲವು ಘಳಿಗೆಗಳ ಕಾಲ.

ಹೀಗೆ ನಮ್ಮ ದಿನ ಪ್ರಾರಂಭವಾಗುತ್ತಿತ್ತು.ಇಷ್ಟು ಹೊತ್ತಿಗೆ ವೇದಪಾಠಶಾಲೆಯ ಕೊನೆಯ ಸೋಮಾರಿ ಕೂಡ ಎದ್ದು ಸ್ನಾನ ಪೂರೈಸಿ ಆಗಿರುತ್ತಿತ್ತು.ಇನ್ನು ಗಂಜಿ ಊಟದವರೆಗೆ ಕಾಯುವ ಕೆಲಸ.ಅಷ್ಟರವರೆಗೆ ಅಂದು ಕಲಿಯಬೇಕಾದ ಮಂತ್ರಗಳ ಮೇಲೆ ದೃಷ್ಟಿ ಹಾಯಿಸುವ ಕೆಲಸ.
ಗಂಜಿಯ ಬಳಿಕ ಓತಪ್ರೋತವಾಗಿ ಹತ್ತು ಘಂಟೆಯವರೆಗೆ ಮಂತ್ರಪಾಠ ಬಳಿಕ ಕಷಾಯ ಸೇವನೆ.ಅದರ ನಂತರ ಪುನಹ ಮಧ್ಯಾಹ್ನದವರೆಗೆ ಮಂತ್ರಪಾಠ.ಕಾಲು ಮಡಚಿಕುಳಿತು ಇರುವೆ ಹತ್ತಿದರೆ ನಿಂತುಕೊಂಡು ಮಂತ್ರ ಪಠಣ.ಸರಿಯಾಗಿ ಸ್ವರ ಏರದಿದ್ದಲ್ಲಿ ಇಳಿಯದಿದ್ದಲ್ಲಿ ಗುರುಗಳ ಬೆತ್ತ ಏರುತ್ತಿತ್ತು.
ಹೀಗೆ ಸಂಜೆಯಾದರೆ ಏನೋ ಖುಶಿ.ಸಂಜೆ ಅತ್ಯಂತ ಮುಖ್ಯವಾದ ಕಾರ್ಯಕ್ರಮವಿರುತ್ತಿತ್ತು.೯೦% ಜನ ಸಂಜೆಯ ನಿರೀಕ್ಷೆಯಲ್ಲ್ಲಿ ಇರುತ್ತಿದ್ದೆವು.ಯಾಕೆಂದರೆ ಸಂಜೆ ಸ್ನಾನಕ್ಕಾಗಿ ಮೋಜು ಮಾಡಲು ಕುಮಾರಧಾರೆಗೆ ಹೋಗುವ ಅವಕಾಶವಿತ್ತು ಅದೂ ನಮ್ಮ ಗುರುಗಳು Free ಇದ್ದರೆ ಮಾತ್ರ.

ಸುಮಾರು ೧ ಕಿಮೀ ದೂರ ನಾವು ಮೀಯುತ್ತಿದ್ದ ಸ್ಥಳ ಅಗ್ರಹಾರವೆಂದು ಹೆಸರು.ಅಲ್ಲಿ ಸ್ವಾಮಿಗಳ ವೃಂದಾವನವಿತ್ತು(ಸ್ವಾಮಿಗಳ ಸಮಾಧಿ ಸ್ಥಳ).


ಮತ್ಯಾವುದೋ ಒಂದು ಶಿವನ ದೇವಸ್ಥಾನ.ಎರಡು ಮೂರು ವರ್ಷಗಳ ಹಿಂದೆ ಜೀರ್ಣೋಧ್ಧಾರವಾದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.ಅಲ್ಲಿ ಸಾಧಾರಣ ೩-೩.೫ ಅಡಿ ಎತ್ತರ ನೀರಿರುತ್ತಿತ್ತು.








.
ಗುರುಗಳ ಹದ್ದಿನ ಕಣ್ಣಿನ ಕಾವಲಿನಲ್ಲಿ ನೀರಿನಲ್ಲಿ ನಮ್ಮ ಜಲಕ್ರೀಡೆ.ಹೊಸ ಹುಡುಗರ ಕಾಲು ಎಳೆಯುವುದು ದೊಡ್ಡವರ ಬೆನ್ನ ಮೇಲೆಹತ್ತಿ ಎರಡುಮೂರು ಜನ ಅವರನ್ನು ಮುಳುಗಿಸಲು ಪ್ರಯತ್ನಿಸಿ ಕೊನೆಗೆ ತಾವೇ ನೀರು ಕುಡಿದು.ಸುಮ್ಮನೆ ದೂರ ಹೋಗುವುದೂ.ನಮ್ಮ ದೈನಂದಿನ ಆಟಗಳು.ಅಷ್ಟರಲ್ಲಿ ಉಳಿದವರ ಸ್ನಾನವಾಗುವ ಮುಂಚೆ
ಬಟ್ಟೆಗಳು ಒಗೆಯಲ್ಪಟ್ಟು ಶುಚಿಯಾಗಬೇಕು ಬಳಿಕ ಸ್ನಾನ.ಒಂದು ವರ್ಷದ ಸತತ ಪ್ರಯತ್ನದ ಬಳಿಕ ಎರಡನೇ ವರ್ಷದಲ್ಲಿ ನಾನು ಈಜಲು ಕಲಿತೆ.ಇನ್ನು ನೀರಿಂದ ಮೇಲೆ ಬಂದ ಮೇಲಿನ ಗೋಳೇ ಬೇರೆ.ನೀರೊಳಗೆ ಇದ್ದ ಕಲ್ಲುಗಳಿಗೆ ಢೀ ಹೊಡೆದರೆ ನೀರೊಳಗೆ ಗಮನಕ್ಕೆ ಬರುವುದಿಲ್ಲ.ನೀರಿಂದ ಮೇಲೆ ಬಂದ ಮೇಲೆಯೇ ಅದರ ಅವಸ್ಥೆ ಗೊತ್ತಾಗುವುದು.
ಅಂತೂ ಹೀಗೆ ಪುನಹ ಹಿಂದಿರುಗಿ ಪಾಠಶಾಲೆಗೆ ಬಂದಮೇಲೆ ಪುನಹ ಸ್ನಾನ ಮಾಡಬೇಕಾದಷ್ಟು ಬೆವರು ಇಳಿದಿರುತ್ತಿತ್ತು.ಮತ್ತೆ ಕೆಲವೊಂದು ಬಾರಿ ನಮ್ಮ ಜ್ಯೋತಿಷ್ಯಗುರುಗಳು ಬಂದರೆ ಅಗ್ರಹಾರ Cancel.ಆದರೆ ಕ್ಲಾಸ್ ಬೇಗ ಮುಗಿದರೆ ಒಂದು Hope ಇರುತ್ತಿತ್ತು.


ಹೀಗೆ ಇಷ್ಟೆಲ್ಲಾ ನಡೆದಾಗುವಾಗ ಸಂಜೆ ಆರು ದಾಟಿರುತ್ತಿತ್ತು.ಈ ಗಡಿಬಿಡಿಯಲ್ಲಿ ನಮ್ಮ ಸಂಜೆಯ ಉಪಹಾರದ ಬಗ್ಗೆ ಹೇಳುವುದೇ ಮರೆತೆ.ಸಂಜೆ ೪ ಕ್ಕೆ ನಮ್ಮ ತರಗತಿಗಳು ಮುಗಿದಿರುತ್ತಿದ್ದವು.ಆ ಬಳಿಕ ಲಘು ಉಪಾಹಾರ.ಅವಲಕ್ಕಿ ಅಥವಾ ಸಜ್ಜಿಗೆ ಇತ್ಯಾದಿ ಇತ್ಯಾದಿ ಇವೆರಡು most commom.ಜತೆಗೆ ಚಹಾ ಕಾಫಿ ಅಥವಾ ಕಷಾಯ.
೬.೩೦ ಕ್ಕೆ ಗುರುಗಳು Mood ಚೆನ್ನಗಿದ್ದರೋ ಇಲ್ಲದಿದ್ದರೋ ಅಂತು ವಿಷ್ಣುಸಹಸ್ರನಾಮ ಪಾರಾಯಣ.ಬಳಿಕ ೮-೮.೩೦ ರ ಹೊತ್ತಿಗೆ ಊಟ.ಬಳಿಕ ನಮ್ಮ ಹರಟೆ ಕಟ್ಟೆಗಳು.ಆಟಗಳು ಲೂಡೋ :D ಇತ್ಯಾದಿ.ಒಂದು ದಿನ ಮುಗಿಯಿತು, ಇನ್ನೆಷ್ಟುದಿನವಿದೆ ಎಂದು ಲೆಕ್ಕಾಚಾರ. ಬೊಬ್ಬೆ ಹೊಡೆದರೆ ಮಾತ್ರ ತುಸು ತೊಂದರೆಯಿತ್ತು.

ಹೀಗೆ ಇಷ್ಟಾಗುವ ಹೊತ್ತಿಗೆ ಎಳೆಯ ಕಣ್ಣುಗಳು ನಿದ್ದೆಯ ನಿರೀಕ್ಷೆಯಲ್ಲಿ ದಣಿದಿರುತ್ತಿತ್ತು.ಮನೆಯಲ್ಲಾದರೆ ಅಮ್ಮಾ ಹಾಸಿಗೆ ಹಾಸು ಎಂದು ಹೇಳಿದರೆ ಹಾಸಿಗೆ ಸಿಧ್ದ.ಇಲ್ಲಿ ಅಮ್ಮನ ನೆನಪು ಮಾತ್ರ ಹಾಸಿಗೆ ನಾವೇ ಹಾಸಿಕೊಂಡು,ನಿದ್ರಾದೇವಿಯ ಮಡಿಲಿಗೆ ಜಾರಿಕೊಳ್ಳುತ್ತಿದ್ದೆವು.
ಇನ್ನು ಕಣ್ಣು ಮುಚ್ಚಿ ತೆರೆಯುವುದರೊಳಗೆ ಬೆಳಗಾದಂತೆ ಭಾಸವಾಗುತ್ತಿತ್ತು :O.ಬೆಳಗ್ಗೆ ಎದ್ದು ಅದೇ ದಿನಚರಿ.

ಇನ್ನೊಂದು ಬೆಳಗ್ಗೆ ಹಾಗೂ ಸಂಜೆ ನಮ್ಮ ಭೇಟಿ ಸುಬ್ಬಣ್ಣನ(ಸುಬ್ರಹ್ಮಣ್ಯ) ಜತೆಗೆ ನಿಗದಿಯಾಗಿತ್ತು.ಒಂದು ಉದ್ದನೆಯ ಸಾಲು ನೇರವಾಗಿ ದೇವಳದ ಒಳಗೆ ತೆರಳಿ ಅಲ್ಲಿಂದ ಆದಿ ಸುಬ್ರಹ್ಮಣ್ಯಕ್ಕೆ ಅಲ್ಲಿ ದೇವರಿಗೆ ಪ್ರದಕ್ಷಿಣೆ ಬಂದು ನಮಸ್ಕರಿಸಿ ಪುನಹ ಬಂದು ಸುಬ್ರಹ್ಮಣ್ಯನಿಗೆ ನಮಸ್ಕರಿಸಿ ಸುಬ್ರಹ್ಮ್ಣಣ್ಯ ಮಠಕ್ಕೆ ಪ್ರದಕ್ಷಿಣೆ ಬಂದು.ಪಾಠಶಾಲೆಗೆ.ಇದು ಬೆಳಗ್ಗೆ ಹಾಗೂ ರಾತ್ರಿ ಯ ಪರಿಪಾಠ.
ರಾತ್ರಿ ಆದಿ ಸುಬ್ರಹ್ಮಣ್ಯಕ್ಕೆ ಭೇಟಿಯಿರಲಿಲ್ಲ.ಇನ್ನು ವೇದಪಾಠಶಾಲೆಯಲ್ಲಿ ನಡೆದ ಕೆಲವು ವಿಚಿತ್ರ ಘಟನೆಗಳು ಮುಂದಿನ ಸಂಚಿಕೆಯಲ್ಲಿ.
ನಮಸ್ಕಾರ

Thursday, May 24, 2007

ವಸಂತ ವೇದಪಾಠ ಶಿಬಿರದ ನೆನಪುಗಳು

      ಏನನ್ನಾದರೂ ಮರೆಯುವುದೆಂದರೆ ಎಷ್ಟು ಸುಲಭ ಆದರೆ ಅದನ್ನೇ ನೆನಪಿನಲ್ಲಿಟ್ಟುಕೊಳ್ಳುವುದಕ್ಕೆಬಹಳ ಕಷ್ಟ.ಇರಲಿ ಈ ಮಾತು ಯಾಕೆ ನೆನಪಾಯತು ಎಂದರೆ ಈ ಬ್ಲಾಗ್ ಗೆ ನಾನು ಆರಿಸಿಕೊಂಡ ವಿಷಯವೇ ಅಂತಹದ್ದು.ನನ್ನ ಬಾಲ್ಯದ ಮಂತ್ರಪಾಠ ತರಗತಿಗಳ ಬಗ್ಗೆ ಬರೆಯಬೇಕಂಬ ಉಪಾಯ ಹೊಳೆಯಿತು,ಬರೆಯುವುದಾದರೂ ಏನನ್ನು ? ನಾನು ಸುಬ್ರಹ್ಮಣ್ಯಕ್ಕೆ ಅದಕ್ಕಾಗಿ ಹೋದದ್ದು ಸುಮಾರು ೭ ವರ್ಷಗಳ ಹಿಂದೆ ಆದರೂ ಆ ನೆನಪುಗಳು ಮಾಸಿಲ್ಲ ಮನಸ್ಸಿನ ಮೂಲೆಯ ಯಾವುದೋ ಪುಟಗಳಲ್ಲಿ ಅಡಗಿ ಕುಳಿತಿವೆ ಒಂದೊಂದನ್ನೇ ಹೊರಗೆಳೆಯಬೇಕು ಅಷ್ಟೇ.
ಮೊದಲ ಬಾರಿ ನಾನು ಉಪನಯನದ ಬಳಿಕ ೫ ನೇ ತರಗತಿಯ ಬೇಸಿಗೆ ರಜೆಯಲ್ಲಿ ಒಲ್ಲದ ಮನಸ್ಸಿನಿಂದ ಅಪ್ಪನ ಒತ್ತಾಯಕ್ಕೆ ವೇದಪಾಠಶಾಲೆಗೆ ಹೋಗಬೇಕಾಯಿತು.

ನನ್ನ ಆ ಮೂರು ವರ್ಷಗಳ ಬೇಸಿಗೆ ರಜೆಯ ೧.೫ ತಿಂಗಳುಗಳ ನೆನೆಪುಗಳು ತುಂಬಾ ಖುಶಿ ಕೊಡುತ್ತವೆ.ಅಲ್ಲಿ ನನ್ನದೇ ವಯಸ್ಸಿನ ನನಗಿಂತ ಹೆಚ್ಚು ಅಥವಾ ಕಡಿಮೆ ವಯಸ್ಸಿನ ವಟುಗಳ ಜತೆಯಲ್ಲಿ ಬೆರೆತು ಕಳೆದ ಆ ಸಮಯಗಳು ಅಪೂರ್ವ ಅನುಭವಗಳು.ನಾನು ಅದೇ ಸಮಯದಲ್ಲಿ ಕಲಿತ ಒಂದು ಹಿಂದಿ ಕವಿತೆ ನೆನಪಾಗುತ್ತದೆ ಬಾರ್ ಬಾರ್ ಅತೀಹೆ ಮುಜ್ ಕೋ 
ಮಧುರ್ ಯಾದ್ ಬಚ್ ಪನ್ ತೇರೀ ಆ ಸಮಯದಲ್ಲಿ ಪದ್ಯ ಏನೋ ಒಂದು ಐದು ಅಂಕಗಳ ಆಶೆಗೆ ಕಲಿತದ್ದು ಆದರೆ ಅದರ ಅರ್ಥ ಎಷ್ಟು ವಿಶಾಲವಾಗಿದೆ ಎಂದು ತಿಳಿದದ್ದು ಆ ಮೇಲೆಯೇ.

ನಮ್ಮ ಶಿಬಿರವನ್ನು ಹೊಗುವುದರ ಒಂದು ವಾರದ ಮೊದಲು ನಾನು ನನ್ನ ಅಜ್ಜನ ಮನೆಗೆ ಬಂದು ತಂಗಿದ್ದೆ.ಅಲ್ಲಿಂದ ಸುಬ್ರಹ್ಮಣ್ಯಕ್ಕೆ ೧೮ ಕಿ.ಮೀಗಳಾಗುತ್ತವೆ.
 
ಹೇಗೋ ಅಂತೂ ಒತ್ತಾಯದಿಂದ ಪಾಠಶಾಲೆಯ ಮೊದಲನೆಯ ವರ್ಷದ ಪ್ರಥಮ ದಿನ ತಂದೆ ತಾಯಿ ಜತೆಗೆ ವೇದಪಾಠಶಾಲೆಗೆ ಭಾರವಾದ ಹೆಜ್ಜೆ ಹಾಕಿದೆ.ಅಲ್ಲಿಗೆ ತಲುಪಿದ ಬಳಿಕ 
ನಮ್ಮದೇ ಊರಿನ ಗೋಪಿ ನನಗೆ ಜತೆಯಾದ.
ಸ್ವಲ್ಪ ಹೋದಜೀವ ಬಂದಂತಾಯಿತು ನನಗೆ. "ಅಬ್ಬ ಇವ ಒಬ್ಬ ಆದರೂ ಇದ್ದಾನ್ನೆ ಸಧ್ಯಕ್ಕೆ "ಎಂದು ನಿಟ್ಟ್ಸುಸಿರು ಬಿಟ್ಟೆ.ಹೀಗೆ ಆದಿನ ನನ್ನ ಮತಾ ಪಿತರು ನನ್ನನ್ನು 
೨ ತಿಂಗಳ ಅಜ್ನಾತವಾಸಕ್ಕೆ ಬಿಟ್ಟು ಭಾರವಾದ ಮನಸ್ಸಿನಿಂದ ಮನೆಗೆ ತೆರಳಿದರು.
ಯಾಕೋ ಏನೋ ಆ ದಿನ ಸಂಜೆ ಸಂಧ್ಯಾವಂದನೆ ಮಾಡುವಾಗ ಒಂದು ರೀತಿಯ ಏಕಾಂಗಿ ಎಂಬ ಭಾವ ನನ್ನನ್ನು ಕಾಡತೊಡಗಿತ್ತು.
ಊಟ ಮಾಡುವಾಗ ಊಟ ಬಡಿಸುತ್ತಿರುವ ಸಮಯದಲ್ಲಿ ಭಗವದ್ಗೀತೆ ಹೇಳುವುದು ನಮ್ಮ ಅಲ್ಲಿನ ಪರಿಪಾಠ.ನಮ್ಮ ಪುಸ್ತಕಗಳು ಆದಿನ ನಮ್ಮ ಕೈ್ಸೇರಿರಲಿಲ್ಲವಾದ್ದರಿಂದ ಭಗವದ್ಗೀತೆ ಏನೇನೋ ಕೇಳಿಸುತ್ತಿತ್ತು ನನಗೆ :D . ಅಂತೂ ಆದಿನ ಊಟ ಮಾಡಿ ರಾತ್ರಿ ಮರುದಿನದ ನಿರೀಕ್ಷೆಯಲ್ಲಿ ಮಲಗಿದೆ....
ಇನ್ನು ಪ್ರಾರಂಭವಾದದ್ದು ಸಿಂದಾಬಾದನ ಸಮುದ್ರಯಾನದಂತೆ ವಿಚಿತ್ರ ಪರಿಸ್ಥಿತಿಗಳು.ಬೆಳಗ್ಗೆ, ಮನೆಯಲ್ಲಿದ್ದಾಗ ಸೂರ್ಯೋದಯದ ಬಳಿಕ ಆತನೇ(ಸೂರ್ಯ) ನನ್ನನ್ನು ಎಬ್ಬಿಸಬೇಕಿತ್ತು ಆದರೆ ಪರಿಸ್ಥಿತಿ ಇಲ್ಲಿ ತದ್ವಿರುದ್ಧ ಅವನನ್ನು ನಾವೇ ಎಬ್ಬಿಸಬೀಕಿತ್ತು ಅದೂ ಅತ ಬೇಗನೆ ಏಳುವ ಆಸಾಮಿಯಲ್ಲ ನಾವು ಎದ್ದು ಒಂದೆರಡು ಘಂಟೆಯಾದರೂ ಬೇಕಿತ್ತು ಆತ ಏಳಲು :P.ಎದ್ದಮೇಲೆ ಶೌಚವಾಗಬೇಡವೇ ? ಅದಕ್ಕೆ ನಮಗಿದ್ದ ಆಸರೆ ಸಾರ್ವಜನಿಕ ಶೌಚಾಲಯ.ಅಲ್ಲಿ ಯಾವುದ್ಯಾವುದೋ ಲಿಪಿಗಳು ಗೋಡೆಯ ಮೇಲೆಲ್ಲಾ.ಏನೋ ನನಗಂತೂ ಒಂದಕ್ಕೂ ತಲೆ ಬುಡವಿಲ್ಲದಂತೆ ತೋರುತ್ತಿತ್ತು.ಅದಾದಬಳಿಕ ಬಿಸಿನೀರನ್ನು ನೆನೆಯುತ್ತಾ ತಣ್ಣೀರಿನಲ್ಲಿ ಸ್ನಾನ.. ಊಹುಹು ಆಹಹ ಸಂಗೀತಾಭ್ಯಾಸ.ನಮ್ಮ ಗೋಪಿ ಭಾರೀ ಚಾಲೂ ರಾತ್ರೆ ಅಡುಗೆ ಭಟ್ಟರು ಮರುದಿನದ ಗಂಜಿಗೆ ಇಟ್ಟಿದ್ದ ನೀರು ನಮ್ಮ ಸ್ನಾನಕ್ಕೆ ಸಂದಾಯವಾಗುತ್ತಿತ್ತು (ಕೆಲವೊಮ್ಮೆ ಮಾತ್ರ).ಮತ್ತೆ ಪಾತ್ರೆ ತಣ್ಣೀರಿನಿಂದ ತುಂಬಿಕೊಂಡು ತೆಪ್ಪಗೆ ಕೂತಿರುತ್ತಿತ್ತು ಒಲೆಯ ಮೇಲೆ ಏನೂ ಅರಿಯದವನಂತೆ(ಪಾತ್ರೆ ಪುಲ್ಲಿಂಗವೋ ಸ್ತ್ರೀ ಲಿಂಗವೋ ಎಂಬ confusion ಬೇಡ).

ಇನ್ನು ನಮಗೆ ಬೇರೆ ಕಾರ್ಯಕ್ರಮಗಳಿಲ್ಲ ಸುಮ್ಮನೆ ಗಂಜಿ ತಯಾರಾಗುವುದನ್ನು ಕಾಯ್ವ ಕೆಲಸ.ಅಷ್ಟರವರೆಗೆ ಆಮೇಲೆ ಎದ್ದವರಿಗೆ ನಮ್ಮ ಸ್ನಾನವಾಯಿತು 
ಎಂದು ಜಂಭದಿಂದ ಹೇಳುವ ಕೆಲಸ.
ಜಪ ಎಷ್ಟೊತ್ತಿಗೆ ಮಾಡುತ್ತಿದ್ದನೋ ನೆನಪಿಲ್ಲ.ಅಂತೂ ಮಾಡುತ್ತಿದ್ದೆ ಅನ್ನೋದು ನಮ್ಮ ಹನುಮಂತನಿಗೂ ಗೊತ್ತು.
ಹಾಂ ನಮ್ಮ ಹನುಮಂತ ಯಾರು ಅಂತ ಕುತೂಹಲ ಬಂತಾದ್ರೆ ಒಳ್ಳೇದು..
Keep Guessing ನಂಗೆ type ಮಾಡಿ ಕೈ ನೋಯೊಕ್ಕೆ ಪ್ರಾರಂಭವಾಯ್ತು.. ಹನುಮಂತನಜತೆಗೆ ನಿಮ್ಮ ಭೇಟಿ ಮುಂದಿನ Post ನಲ್ಲಿ
ನಮಸ್ಕಾರ.


ವೇದಪಾಠಶಾಲೆಲಿ ಇದ್ದದು ಇವ              

ನಿಮ್ಮ ಅಭಿಪ್ರಾಯ