Friday, June 20, 2014

ಊಟಕ್ಕಿಲ್ಲದ ಉಪ್ಪಿನಕಾಯಿಯೂ ಉಪಯೋಗಕ್ಕಿಲ್ಲದ ರೈಲೂ ಎಷ್ಟಿದ್ದರೇನು ಪ್ರಯೋಜನ ಗೌಡರೇ ?

ಬೆಂಗಳೂರು ಮಂಗಳೂರು ರೈಲಲ್ಲಿ ಸೀಟು ಸಿಗುವುದೇ ಕಷ್ಟ, ಮಂಗಳೂರು ರೈಲು ಎಂಬುದು ಕೇವಲ ಹೆಸರಿಗೆ ಮಾತ್ರ ಎಂಬಂತಾಗಿದೆ, ಇಲ್ಲಿಂದ ಅಲ್ಲಿಗೆ ತಲುಪಲು ತೆಗೆದುಕೊಳ್ಳುವ ಸಮಯದಲ್ಲಿ ಎರಡು ಬಾರಿ ಮಂಗಳೂರಿಂದ ಬೆಂಗಳೂರಿಗೆ ಹೋಗಿ ಬರಬಹುದು. ಅರಸೀಕೆರೆಯ ಮೂಲಕ ಇರುವ ನೇರ ಮಾರ್ಗವನ್ನು ಬಿಟ್ಟು ಮೈಸೂರು ಮೂಲಕವಾಗಿ ೧೨ ಘಂಟೆ ಪ್ರಯಾಣ(ಸ) (ಪ)ಮಾಡಬೇಕು. ಇನ್ನು ಮಂಗಳೂರಿನಿಂದ ಹೊರಟರೆ ಮರುದಿನ ಕಛೇರಿ ಸಮಯಕ್ಕಂತೂ ಬೆಂಗಳೂರು ತಲುಪಲು ಸಾಧ್ಯವೇ ಇಲ್ಲ. ರೈಲು ಬೆಂಗಳೂರು ತಲುಪುವಾಗಲೇ ೯ ಘಂಟೆ ಕಳೆದಿರುತ್ತದೆ. ನಗರದ ಹೊರಪ್ರದೇಶದಲ್ಲಿ ಮನೆಯಿದ್ದರಂತೂ ಮಧ್ಯಾಹ್ನವಲ್ಲದೆ ಮನೆಗೆ ತಲುಪಲು ಸಾಧ್ಯವೇ ಇಲ್ಲ. ನಡುವಲ್ಲಿ ಹೊಟ್ಟೆ ಹಸಿವಾಯಿತೆಂದು ಹೋಟೇಲಿಗೆ ನುಗ್ಗಿ ಏನಾದರೂ ತಿಂಡಿ ತಿಂದರೆ ಅಲ್ಲಿಗೆ ಕಥೆ ಮುಗಿಯಿತೆಂದೇ ಅರ್ಥ, ಮರುದಿನವೂ ಕಛೇರಿಗೆ ರಜೆ ಹಾಕಿ ಉತ್ತಮ ವೈದ್ಯರನ್ನು(ಈ ಬೆಂಗಳೂರಿನಲ್ಲಿ ಅಸಲಿ ವೈದ್ಯರು ಯಾರೆಂದು ತಿಳಿಯುವುದೂ ದೊಡ್ಡ ಸಾಹಸವೇ ಸರಿ) ಹುಡುಕಿ ಅಲ್ಲಿ ಸರತಿ ಸಾಲಿನಲ್ಲಿ ನಿಂತು ಔಷಧೋಪಚಾರ ಪಡೆಯುವಷ್ಟರಲ್ಲಿ ಕಾಯಿಲೆ ಏನೆಂದೇ ಮರೆತು ಹೋಗಿರುತ್ತದೆ.
ಮಾನ್ಯ ಸದಾನಂದ ಗೌಡರೆ ಸ್ವಲ್ಪ ಆನಂದ ನಮಗೂ ಇರಲಿ ಸ್ವಾಮಿ ದಯವಿಟ್ಟು ಈ ಊಟಕ್ಕಿಲ್ಲದ ಉಪ್ಪಿನಕಾಯಿ ರೈಲನ್ನು ಒಂದು ಉಪಕಾರಕ್ಕೆ ಆಗುವಂತೆ ಮಾಡಿ ನೀವು ಸ್ವಲ್ಪ ದರ ಏರಿಸಿದ್ರೂ ಆಡ್ಡಿ ಇಲ್ಲ ಆದ್ರೆ ಊರಿಡೀ ನಮ್ಮನ್ನು ಸುತ್ತು ಬರುವಂತೆ ಮಾಡಿ ಮೊದಲೇ ಈ ಬೆಂಗಳೂರಿನ ರಸ್ತೆಗಳಲ್ಲಿ ಮನೆಯಿಂದ ಕಛೇರಿಗೆ ಕಛೇರಿಯಿಂದ ಮನೆಗೆ ಅಲೆದು ಅಲೆದು ಸುಸ್ತಾಗಿರುವ ನಮಗೆ ನಮ್ಮ ಊರು ಸೇರುವುದಕ್ಕೂ ಅಲೆಯುವಂತೆ ಮಾಡಬೇಡಿ, ದಯವಿಟ್ಟು ರೈಲು ನೇರವೇ ಹೋಗಲಿ ಒತ್ತಡಕ್ಕೆ ಮಣಿಯದೇ ಕಾರ್ಯ ಮಾಡಿ ಈಗ ಸಿಕ್ಕಿರುವ ಅವಕಾಶವನ್ನು ಕೈಚೆಲ್ಲಿಕೊಳ್ಳಬೇಡಿ.
ದಯವಿಟ್ಟು ಕ್ರಯ ಏರಿಸುವುದಕ್ಕೆ ಮುಂಚೆ ಈಗಿರುವ ರೈಲು ನಮಗೆ ಎಷ್ಟು ಪ್ರಯೋಜನಕಾರಿಯಾಗಿದೆ ಅಂತ ಒಮ್ಮೆ ಯೋಚಿಸಿ ನೋಡಿ. ರೈಲಿಗೂ ಬಸ್ಸಿಗೂ ಒಂದೇ ಕ್ರಯ ಆದ್ರೆ ಮತ್ತೆ ನಿಮ್ಮ ರೈಲು ಯಾರಿಗೆ ಬೇಕು ಹೇಳಿ. ಮೊದಲು ರೈಲು ಪ್ರಯೋಜನಕ್ಕೆ ಆಗುವಂತೆ ಮಾಡಿ ಮತ್ತೆ ಕ್ರಯ ಹೆಚ್ಚು ಮಾಡಿ.

Thursday, June 12, 2014

ಅಗರಿ-ದೇರಾಜೆ-ಶೇಣಿ-ನೆಡ್ಲೆ-ದಿವಾಣ ಯಕ್ಷಗಾನ ತಾಳಮದ್ದಳೆಗಳು

ಇತ್ತೀಚೆಗೆ ಅಂತರ್ಜಾಲದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹುಡುಕುತ್ತಿದ್ದಾಗ ಅನರ್ಘ್ಯ ರತ್ನಗಳೆರಡು ಸಿಕ್ಕವು.. ಬಹುಷಃ ಸಾಧಾರಣ ಯಕ್ಷಗಾನವೆಂಬ ಪದವನ್ನು ಬಳಸಿ ಹುಡುಕಿದಲ್ಲಿ ಇವು ಸಿಗಲಾರವೋ ಎನೋ. ಯಕ್ಷಗಾನ ಪ್ರಿಯರ ಅಸ್ವಾದನೆಗೋಸ್ಕರ ಈ ಎರಡು ತಾಳಮದ್ದಳೆಗಳ ಕೊಂಡಿಯನ್ನು ಮೂಲ ಪ್ರಕಟಿತ ಪುಟದ ಕೊಂಡಿಯೊಡನೆ ಪ್ರಕಟಿಸುತ್ತಿದ್ದೇನೆ.

ಮೂಲಪುಟ: http://deseesaamprathi.blogspot.in/p/yakshagana-thalamaddale.html

1. ಶಲ್ಯ ಸಾರಥ್ಯ
ಅಗರಿ ಶ್ರೀನಿವಾಸ ಭಾಗವತರು -  (Agari Shrinivasa Bhagavatha)
ನೆಡ್ಲೆ ನರಸಿಂಹ ಭಟ್ ( ಚೆಂಡೆ)- (Nedle Narasimha Bhat)
 ದಿವಾಣ ಭೀಮ ಭಟ್ (ಮದ್ದಳೆ) (Divana Bheema Bhat)

 ದೇರಾಜೆ ಸೀತಾರಾಮಯ್ಯ (ಕೌರವ) (Deraje Seetharamayya)
 ಶೇಣಿ ಗೋಪಾಲಕೃಷ್ಣ ಭಟ್ (ಶಲ್ಯ) (Sheni Gopalakrishna Bhat)


http://www.divshare.com/download/19235703-afe

2.ಉತ್ತರನ ಪೌರುಷ (ನಾದಲಹರಿ ಕ್ಯಾಸೆಟ್ಸ್) ದೇರಾಜೆ ಸೀತಾರಾಮಯ್ಯ (ಉತ್ತರ ಕುಮಾರ) 
ಶೇಣಿ ಗೋಪಾಲಕೃಷ್ಣ ಭಟ್ (ಬೃಹನ್ನಳೆ)  
ವಿಟ್ಲ ಗೋಪಾಲಕೃಷ್ಣ ಜೋಷಿ (ಗೋಪಾಲಕ)
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ಉತ್ತರೆ) 
ಪಕಳಕುಂಜ ಶ್ಯಾಮ ಭಟ್ (ಕೌರವ)
ಮಾದೆಕಟ್ಟೆ ಈಶ್ವರ ಭಟ್ (ಭಾಗವತರು).







http://www.divshare.com/download/19235986-af0

Monday, May 26, 2014

ನರೇಂದ್ರ ಮೋದಿ ಅಭಿನಂದನಾ ಗೀತೆ

ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ನಮ್ಮದೊಂದು ಅಭಿನಂದನೆ. ಮಿತ್ರರಾದ ರಂಗನಾಥರು ನನ್ನ ಕೋರಿಕೆಯ ಮೇರೆಗೆ ಯಕ್ಷಗಾನೀಯ ಶೈಲಿಯಲ್ಲಿ ಹಾಡಿದ್ದಾರೆ , ಕೇಳಿ ಆನಂದಿಸಿ. ನರೇಂದ್ರ ಮೋದಿ ಅಭಿನಂದನಾ ಗೀತೆ

ಬಂದನಿಂದು ಭಾರತಾಂಬೆ ಭಾಗ್ಯೋದಯ ಚಂದ್ರನು
ದುಷ್ಟರೊಡಲ ದರ್ಪ ಹರಿವ ಕಾಲರೂಪಿ ಭೀಮನು
ಶಿಷ್ಟ ಜನರ ಪೊರೆದು ಧರ್ಮವನ್ನು ಕಾಯ್ವ ಧೀರನು
ಬಿಂಕದಿಂದ ಮೆರೆವ ಭ್ರಷ್ಟರನ್ನು ತುಳಿವ ರುದ್ರನು
ಸರ್ವ ಜನರ ಮಾನಸದಲಿ ಮೆರೆಯುತಿರುವ ಮನುಜನು
ಭರತ ಭೂಮಿಯುನ್ನತಿಕೆಯ ಕಾಯ್ವೆನೆಂಬ ಆಣೆಯಿಟ್ಟು
ಆರು ವೈರಿಗಳನು ಮಣಿಸಿ ಸರ್ವಶ್ರೇಷ್ಠ ಪದವಿಯತ್ತ
ಈತನಿಂದು ಪಯಣಹೊರಟ ಸರ್ವ ಜನರ ಮತದಲಿ
ಒಂದೆ ಗುರಿಯು ಒಂದೆ ಕರೆಯು ಸ್ವಾರ್ಥರಹಿತ ಕಜ್ಜವು
ಸರ್ವಭಾರತೀಯರೇಳಿ ಚಿಂತೆಗಳನು ದೂರಮಾಡಿ
ಬಂದನಿಂದು ಅಂಬೆ ಮುಕುಟಮಣಿಯ ಕಾಯ್ವ ಸರ್ಪನು
ಇಳೆಯ ಸಕಲ ಕೊಳೆಯತೊಳೆದು ಶುಭ್ರವಸನವುಡಿಸುವಂಥ
ಪರಮ ಋಷಿಯ ಪೋಲ್ವ ಮಹಿಮ ಈತನನ್ನು ಹರಸಿ ಎಲ್ಲ
ಇಂದು ಧರನ ವಾಣಿವರನ ಸಿರಿಯರಸನ ಕರುಣವಿರಲಿ
ಮಾತೆ ಶಾಂಭವಿ ಕಾಯಲಿವನ ಸರ್ವ ಪ್ರಿಯ ನರೇಂದ್ರನ...

ಲನಾಭಟ್ಟ-೨೬-೦೫-೨೦೧೪

Thursday, April 10, 2014

ತೆಂಕುತಿಟ್ಟು ಯಕ್ಷಗಾನದಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಒಂದು ಅನಿಸಿಕೆ !


ಯಕ್ಷಗಾನ ಮೂಲತಃ ಜನಪದ ಕಲೆಯೇ ಆಗಿದ್ದರೂ ಸಾಗುತ್ತಾ ಸಾಗುತ್ತಾ ಕಾಲ ಕಳೆದಂತೆ ಹಲವಾರು
ಬೆಳವಣಿಗೆಗಳು ಮತ್ತು ಬದಲಾವಣೆಗಳು ನಡೆದು ಆವಿಷ್ಕಾರಗಳು ಉಂಟಾಗಿವೆ. ಇತ್ತೀಚೆಗೆ ಯಕ್ಷಗಾನಕ್ಕೆ ಶಾಸ್ತ್ರೀಯ ಕಲೆಯ ಸ್ಥಾನಮಾನ ನೀಡಬೇಕೆಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ ಎನ್ನುವುದು ನನಗೆ ತಿಳಿದ ವಿಚಾರ. ಯಕ್ಷಗಾನದಲ್ಲಿ ಮೇಲ್ನೋಟಕ್ಕೆ ಕಾಣುವಂತಹ ಹಲವಾರು ಅಂಶಗಳನ್ನು ನಾವು ಗಮನಿಸಿದಾಗ ಯಕ್ಷಗಾನಕ್ಕೆ ಒಂದು ಅನಿಶ್ಚಿತವಾದಂತಹ ಚೌಕಟ್ಟಂತೂ ಖಂಡಿತಾ ಇದೆ ಎಂಬುದನ್ನು ತಿಳಿಯಬಹುದು, ಯಾಕೆಂದರೆ ಯಕ್ಷಗಾನೀಯ ಮತ್ತು ನಾಟಕೀಯ ಎನ್ನುವಂತಹಾ ವಿಭಾಗ ಮಾಡಲು ಸಾಧ್ಯವಿದ್ದಲ್ಲಿ, ಅದು ಯಕ್ಷಗಾನದ್ದಲ್ಲ ಎನ್ನುವಾಗ ಯಕ್ಷಗಾನದ್ದು ಇನ್ನೊಂದಿದೆ ಎಂಬ ಅರ್ಥವಲ್ಲವೇ ?. ಹಾಗಿದ್ದಲಿ ಅದು ಹೇಗೆ ಎಂಬುದನ್ನು ಬಲ್ಲವರಿಂದ ತಿಳಿದು ಹೀಗಿದ್ದಿರಬಹುದು ಎಂಬ ಊಹೆಯನ್ನಂತೂ ಮಾಡಬಹುದು. ರಾಜವೇಷವನ್ನೇ ನಾವು ಮಾದರಿಯನ್ನಾಗಿ ಇಟ್ಟುಕೊಂಡೆವು ಎಂದಾದಲ್ಲಿ ಆ ವೇಷದ ಆಯವನ್ನು ಗಮನಿಸಿದಾಗ ಯಕ್ಷಗಾನೀಯವಾದ ವೇಷ ಹೀಗಿರಬೇಕು ಎಂಬಂತೆ ಊಹಿಸಬಹುದು. ಇತರ ವೇಷಗಳನ್ನು ಅದೇ ವೇಷದ ಮಾದರಿಯಲ್ಲಿ ಸಿದ್ಧಪಡಿಸಬಹುದು, ಇತರ ವೇಷಗಳ ಸ್ವರೂಪವನ್ನು ಊಹಿಸುವಲ್ಲಿ ಈ ಮಾದರಿ ಸಹಾಯಕವಾದೀತು. ವೇಷದ ಮುಖವರ್ಣಿಕೆ, ಆಭರಣ, ದಗಲೆಗಳು ಇತ್ಯಾದಿಗಳ ವಿವರವನ್ನು ಪಕ್ಕಕ್ಕಿಡೋಣ. ಪೂರ್ವರಂಗ ಯಕ್ಷಗಾನದ ಪಾಠಶಾಲೆ ಎನ್ನುವುದನ್ನು ಸರ್ವರೂ ಅಂಗೀಕರಿಸತಕ್ಕಂತಹಾ ವಿಚಾರ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಯಕ್ಷಗಾನದ ಚೌಕಟ್ಟನ್ನು ನಿರ್ಮಿಸುವುದು ಹೇಗೆ ಎಂಬ ಪ್ರಶ್ನೆಗೆ ಪೂರ್ವರಂಗವೇ ಉತ್ತರ ಕೊಡಬಲ್ಲದು ಅನ್ನಿಸುತ್ತದೆ.
ಪೂರ್ವರಂಗದಲ್ಲಿ ನಾನಾ ವೇಶಗಳ ಮಾದರಿಗಳು ಪ್ರಸ್ತುತವಾಗುವುದನ್ನು ಗಮನಿಸಬಹುದು. ಕ್ಲಾವಿದನೋರ್ವ ಕೋಡಂಗಿ ಪಾತ್ರದಿಂದ ತೊಡಗಿ ಬಣ್ಣದ ವೇಶದವರೆಗೆ ನಾನಾ ಹಂತಗಳಲ್ಲಿ ಬೆಳೆಯುತ್ತಾನೆ. ಹಿಮ್ಮೇಳ ವಾದಕರಿಗೂ ಸಹ ಪೂರ್ವರಂಗವನ್ನೇ ಮಾದರಿಯನ್ನಾಗಿಸಿಕೊಂಡು ಚೌಕಟ್ಟನ್ನು ನಿರ್ಮಿಸಬಹುದು, ನಾನು ಉಲ್ಲೇಖಿಸುವ ಚೌಕಟ್ಟು ಎಂದರೆ ಯಕ್ಷಗಾನವನ್ನು ಯಕ್ಷಗಾನವೇ ಆಗಿ ಉಳಿಸಲು ಮಾಡಬೇಕಾದಂತಹ ಪ್ರಯತ್ನ ಎಂದರ್ಥ. ಇನ್ನು ಕೆಲವೊಮ್ಮೆ ರಂಗದಲ್ಲಿ ನಡೆಯುವ ಪ್ರಕ್ರಿಯೆಗಳು ಪ್ರೇಕ್ಷಕನಿಗೆ ಬೇಸರವನ್ನು ತರಿಸಿದಲ್ಲಿ ಕಥೆಯಲ್ಲಿ ಪ್ರೇಕ್ಷಕನ ಮನಸ್ಸನ್ನು ಹಿದಿದಿಟ್ಟುಕೊಳ್ಳುವಲ್ಲಿ ವಿಫಲವಾದಾಗ ಆ ಸಂಗತಿಗಳನ್ನು ವಿಮರ್ಶಿಸಿ ಸರಿಪಡಿಸಿಕೊಳ್ಳದಿದ್ದಲ್ಲಿ ಆ ಸಂಗತಿಗಳು ಮುಂದುವರಿದಲ್ಲಿ ರಂಗಭೂಮಿಗೆ(ಯಕ್ಷಗಾನದ) ಉಂಟಾಗಬಹುದಾದ ಹಿನ್ನಡೆಗಳ ಬಗ್ಗೆ ಕಲಾವಿದ ಯೋಚಿಸಬೇಕಾಗುತ್ತದೆ.

ಈ ಸಂದರ್ಭದಲ್ಲಿ ಇತ್ತೀಚೆಗೆ ನಾನು ನೋಡಿದ ಪ್ರಸಂಗದ ಬಳಿಕ ಮನಸ್ಸಿನಲ್ಲಿ ಮೂಡಿದಕೆಲವು ಸಂಶಯಗಳನ್ನು ಉಲ್ಲೇಖಿಸಬಯಸುತ್ತೇನೆ
೧. ಯಕ್ಷಗಾನ ಅನೇಕ ಪದ್ಯಗಳು ಕೇವಲ ಕೆಲವು ಒಂದೆರಡು ಸಾಲಿನ ಪದ್ಯಗಳಾಗಿರುತ್ತವೆ ಅವುಗಳನ್ನು ಎರಡಕ್ಕಿಂತ ಹೆಚ್ಚು ಬಾರಿ ಪುನರಾವರ್ತಿಸಬೇಕಾದ ಅವಶ್ಯಕತೆ ಇದೆಯೇ ?
2. ತೆಂಕುತಿಟ್ಟಿ ಗೆ ಬಡಗುತಿಟ್ಟಿನಿಂದ ಹರಿದುಬಂದಿರುವ ಚಾಲೂ ಕುಣಿತದ ವಿಪರೀತ ಪ್ರಯೋಗ ಯಾಕೋ ತೀರಾ ಅತಿಯಾಗಿಯೇ ಬಳಕೆಯಾಗುತ್ತಿದೆ ಅನ್ನಿಸಿತು, ಒಂದು ಸರಳ ಪದ್ಯವನ್ನು ೧೫ ನಿಮಿಷಗಳ ವರೆಗೂ ನರ್ತಿಸುವಂತಹಾ ಅವಶ್ಯಕತೆ ಇದೆಯೇ ? ಯಕ್ಷಗಾನದಲ್ಲಿ ಕೇವಲ ನೃತ್ಯಮಾತ್ರ ಮಾಧ್ಯಮವಲ್ಲ ಮಾತುಗಾರಿಕೆಯೂ ಭಾವಪ್ರಕಟಣೆಗೆ,ಕಥಾಸಂವಹನಕ್ಕೆ ಒಂದು ಪ್ರಧಾನ ಮಾಧ್ಯಮವಾಗಿ ಬಳಕೆಯಾಗುತ್ತದೆಯಾದ್ದರಿಂದ, ಮಾತುಗಾರಿಕೆಯನ್ನು ತೀರಾ ಕಡೆಗಣಿಸಿ ಕೇವಲ ನೃತ್ಯಕ್ಕೇ ಪ್ರಾಧಾನ್ಯತೆ ಕೊಡುವಂತಹಾ ಕ್ರಮ ಎಷ್ಟರಮಟ್ಟಿಗೆ ಸರಿ ಮತ್ತು ಸ್ವೀಕಾರಾರ್ಹ ? ತೆಂಕುತಿಟ್ಟಿನ ಯಕ್ಷಗಾನದಲ್ಲಿ ನನಗೆ ತಿಳಿದಂತೆ ನೃತ್ಯಕ್ರಮಗಳು ಅಷ್ಟೇನೂ ವ್ಯಾಪಕವಾಗಿ ಬಿನ್ನವಾಗಿಲ್ಲ ಮತ್ತು ನಿಖರವಾಗಿ ಗುರುತಿಸಲ್ಪಡುವಂತಹ ವೈವಿಧ್ಯತೆಗಳಿಲ್ಲ. ಕೆಲವು ಮೂಲ ಹೆಜ್ಜೆಗಳನ್ನೇ ಎಲ್ಲಾ ತಾಳಗಳಿಗೆ ಅಳವಡಿಸಿ ನರ್ತಿಸಲಾಗುತ್ತದೆ. ಪದ್ಯಾಭಿನಯದ ಜತೆಗೆ ನರ್ತನ ಮಿಳಿತವಾದಾಗ ಆ ಸಂದರ್ಭದ ಭಾವ ಪ್ರಕಟೀಕರಣ ಮತ್ತು ಕಥಾ ಪ್ರಸಾರವೇ ಬಹುಮುಖ್ಯವಾಗುತ್ತದೆ ಮತ್ತು ಮನರಂಜನೆ ಮತ್ತಿನ ಸ್ಥಾನದಲ್ಲಿ ನಿಲ್ಲುತ್ತದೆ, ನೃತ್ಯದ ಸೀಮಿತ ವ್ಯಾಪ್ತಿ ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದರೂ ಈ ಕೊರತೆಯನ್ನು ಉಳಿದೆರಡು ಅಂಶಗಳು ಸರಿದೂಗಿಸುತ್ತದೆ. ನೃತ್ಯವನ್ನೇ ಪ್ರಧಾನವಾಗಿಸಿ ಪರಿಧಿಯನ್ನು ಮೀರಿ ನೃತ್ಯದ ಪುನರಾವರ್ತನೆ ನಡೆದಾಗ ಪ್ರೇಕ್ಷಕನ ಸಹನೆಯೂ ಕೆಡಲಾರದೇ ? ನೃತ್ಯಕ್ಕೂ, ಪದ್ಯಕ್ಕೂ, ಕಥೆಗೂ ಸಂಬಂಧವೇ ಕಡಿದು ಹೋಗಿ ಕಥೆಯ ಚಲನೆಗೆ ಭಂಗವುಂಟಾಗುವುದಿಲ್ಲವೇ. ಸಾಮಾನ್ಯ ಪ್ರೇಕ್ಷಕನಾದ ನನ್ನಿಂದಲೇ ಇಂತಹಾ ಯೋಚನೆಗಳು ಹರಿದು ಬರುತ್ತಿವೆ ಎಂದಾದರೆ ಬಹುಷಹ ಕಲಾವಿದರು ಈ ನಿಟ್ಟಿನಲ್ಲಿ ತಮ್ಮನ್ನು ತಾವು ಒರೆಗೆ ಹಚ್ಚಿಕೊಳ್ಳುವುದು ಉಚಿತವಲ್ಲವೇ ?. ಬಡಗುತಿಟ್ಟಿನಿಂದ ತೆಂಕುತಿಟ್ಟಿಗೆ ಬಂದಿರುವ ಪಾತ್ರಧಾರಿಗಳೂ ತೆಂಕಿನ ಸೂಕ್ಷ್ಮಗಳನ್ನು ಅರಿತುಕೊಂಡು ಈ ನಿಟ್ಟಿನಲ್ಲಿ ಯೋಚಿಸಬೇಕೆನಿಸುತ್ತದೆ.
3. ಇನ್ನು ಸ್ತ್ರೀವೇಶಗಳ ಸೌಮ್ಯ ಪದ್ಯಗಳಿಗೂ ಸಹ ಚೆಂಡೆ ವಾದನ ಬೇಕೆ ? ಮದ್ದಳೆಯ ಸೂಕ್ಷ್ಮವಾದ ನುಡಿತಗಳನ್ನು ಚೆಂಡೆಯ ಜತೆಗೆ ಬಾರಿಸುವಾಗ ಕೇಳುವುದಿಲ್ಲ ಆದ್ದರಿಂದ ಚೆಂಡೆಯ ಜತೆ ಮದ್ದಲೆಯನ್ನು ಒತ್ತುವಾದ್ಯವಾಗಿ ಬಳಸಲಾಗುತ್ತದೆ,ಚೆಂಡೆಯ ಜತೆಗೆ ಕೇವಲ ಇಡಿ ಪೆಟ್ಟುಗಳನ್ನು ಮಾತ್ರ ಬಾರಿಸುವ ಕ್ರಮ. ಚೆಂಡೆ ವಾದಕರೂ ಮದ್ದಳೆ ವಾದಕರೂ ಪರಸ್ಪರ ಹೊಂದಾಣಿಕೆಯಿಂದ ಏಕಮನಸ್ಕರಾದಾಗ ಹೊಮ್ಮಬಹುದಾದ ಪ್ರದರ್ಶನ ಅತ್ಯುತ್ಕೃಷ್ಟವಾಗಿರುತ್ತದೆ. ಭಾಗವತರ ಪದ್ಯವನ್ನು ಮತ್ತಷ್ಟು ಅಲಂಕರಿಸಬೇಕಾದದ್ದು ಚೆಂಡೆ ಮದ್ದಳೆ ವಾದಕರ ಧರ್ಮ ಮತ್ತು ಅದರಿಂದಾಗಿ ಪ್ರದರ್ಶನಕ್ಕೆ ಮತ್ತಷ್ಟು ಕಳೆ ಕಟ್ಟುತ್ತದೆ. ಹಳೆಯ ಧ್ವನಿಸುರುಳಿಗಳನ್ನು ಆಲಿಸಿದಾಗ ಈ ಬಗ್ಗೆ ಪ್ರಮಾಣಗಳು ಗೋಚರಿಸುತ್ತವೆ, ಕೆಲವೊಮ್ಮೆ ಚೆಂಡೆಯ ಇರುವಿಕೆಯೇ ನಮಗೆ ಗೊತ್ತಾಗದಂತಿರುತ್ತದೆ ಕೇವಲ ಬಿಡಿತ ಮುಕ್ತಾಯಗಳ ಸಂದರ್ಭದಲ್ಲಿ ಭೋರ್ಗರೆದು ಧುಮ್ಮಿಕ್ಕುವ  ಜಲಪಾತದ ಗಂಭೀರತೆಯಂತೆ ಚೆಂಡೆಯ ನಾದ ಮೆರೆಯುತ್ತದೆ. ಮೇಳದ ಮದ್ದಳೆವಾದಕನಿಗೂ, ಮದ್ದಳೆಯ ನಾದವನ್ನು ಆಲಿಸಲು ಕುತೂಹಲಿಗರಾಗಿರುವ ಬೆರಳೆಣಿಕೆಯ ಪ್ರೇಕ್ಷಕರ ಮನತಣಿಯುವುದಕ್ಕೋಸ್ಕರವಾದರೂ ಸ್ತ್ರೀಪಾತ್ರಗಳ ಪದ್ಯಕ್ಕೆ, ಕರುಣಾರಸದ ಪದ್ಯಗಳಿಗೆ ಮದ್ದಳೆ ಮಾತ್ರ ಬಾರಿಸುವತ್ತ ಗಮನ ಹರಿಸಬೇಕು.

4. ಇನ್ನು ನಾಟಕೀಯ ವೇಶಗಳ ಬಗ್ಗೆ ಹಲವಾರು ವಿಚಾರಗೋಷ್ಟಿಗಳು ಕಮ್ಮಟಗಳು ನಡೆದಿವೆ. ಕಲಾವಿದರು ನಾಟಕೀಯ ವೇಶಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿದಲ್ಲಿ ಯಕ್ಷಗಾನದ ಸ್ವರೂಪ ಉಳಿದುಕೊಳ್ಳಬಹುದೇನೋ?

ಯಕ್ಷಗಾನಕ್ಕೆ ಬೇಕಾಗಿರುವುದು ಯಕ್ಷಗಾನದ ಚೌಕಟ್ಟಿನಲ್ಲಿದ್ದುಕೊಂಡು ಸೃಜನಶೀಲತೆ. ಒಂದು ಪಾತ್ರವನ್ನು ಹಲವು ರೀತಿಯಲ್ಲಿ ಪ್ರಸ್ತುತ ಪಡಿಸುವತ್ತ ಕಲಾವಿದರು ಗಮನಹರಿಸಬೇಕು. ಆ ನಿಟ್ಟಿನಲ್ಲಿ ಹಿರಿಯರ ಆಶೀರ್ವಾದ, ಮಾರ್ಗದರ್ಶನಗಳು ಸದಾ ಅಗತ್ಯ. ಸೃಜನಶೀಲತೆ ಸಾಧ್ಯವಿಲ್ಲವಾದಲ್ಲಿ ಕಲಾವಿದ ರಂಗದಲ್ಲಿ ಸಮಯ ವಿನಿಯೋಗ ಮಾಡದೇ ಕಥೆಯನ್ನು ಮುಂದುವರಿಸುವತ್ತ ಗಮನ ಹರಿಸಿದರೂ ಪ್ರದರ್ಶನ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಇದಂತೂ ಖಂಡಿತಾ ಸಾಧ್ಯವಿದೆ, ಕಲಾವಿದ ಪಾತ್ರವನ್ನು ಮೆರೆಸಬೇಕೇ ಹೊರತು ತನ್ನನ್ನು ತಾನು ಮೆರೆಸಬಾರದು , ಪಾತ್ರ ಮೆರೆದರೆ ಕಲಾವಿದನೇ ಮೆರೆದಂತೆ ಮತ್ತು ಅಂತಹ ಹಲವಾರು ಕಲಾವಿದರು ಶಾಶ್ವತವಾಗಿ ಜನಮಾನಸದಲ್ಲಿ ನೆಲೆಯಾಗಿಲ್ಲವೇ ? ಶಾಲಾ ವಾರ್ಷಿಕೋತ್ಸವಕ್ಕೆಂದು ಯಕ್ಷಗಾನದ ಬಗ್ಗೆ ಆಗಷ್ಟೇ ಅರಿತುಕೊಳ್ಳುತ್ತಿರುವ ಪುಟಾಣಿಗಳೂ ಕೆಲವೊಮ್ಮೆ ಅದ್ಭುತವಾಗಿ ಪ್ರದರ್ಶನಗಳನ್ನು ಕೊಡುವುದನ್ನು ನಾವು ಗಮನಿಸಬಹುದು. ಕಂಠಸ್ಥಮಾಡಿ ಒಪ್ಪಿಸುವ ಸಂಭಾಷಣೆಗಳೇ ಆದರೂ ಕಲಾವಿದ ಪಾತ್ರವಾಗಿ ಮಾತನಾಡಿದರೆ, ಸಂಭಾಷಣೆಯನ್ನು ಸೀಮಿತವಾಗಿರಿಸಿ ಪರಿಣಾಮಕಾರಿಯಾಗಿ ಉಪಯೋಗಿಸಿದಲ್ಲಿ ಪ್ರೇಕ್ಷಕನ ಮನಸ್ಸು ಕಥೆಯಲ್ಲಿ ನೆಡುವುದರಲ್ಲಿ ಸಂಶಯವಿಲ್ಲ. 

Video: Madhusoodana Alewooraya
ಬಲಿಪ ಭಾಗವತರ ಮಾತುಗಳನ್ನು ಕೇಳಿದಲ್ಲಿ ನಾನು ಹೆಸರಿಸಿದ ಅಂಶಗಳಿಗೆ ಸಾಮೀಪ್ಯತೆಯನ್ನು ಕಾಣಬಹುದು...
ಯಕ್ಷಗಾನಕ್ಕೆ ಬೇಕಾಗಿರುವುದು ಸನ್ನಿವೇಶ ನಿರ್ಮಾಣದ ಸೂಕ್ಷ್ಮಗಳ ತಿಳುವಳಿಗೆ ಮತ್ತು ಅಗಾಧವಾದ ಕಲ್ಪನಾ ಸಾಮರ್ಥ್ಯ. ಯಕ್ಷಗಾನ ಇತರ ಕಲೆಗಳ ಮಟ್ಟಕ್ಕೆ ಬೆಳೆದು ನಿಲ್ಲಲಿ ಎನ್ನುವ ಹಾರೈಕೆಯೊಂದಿಗೆ ಈ ಬರಹ, ಇದರಿಂದಾಗಿ ಯಾರ ಮನಸಿಗಾದರೂ ನೋವಾದಲ್ಲಿ ಕ್ಷಮೆಯಿರಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಆದ್ದರಿಂದ ಇದನ್ನು ಒಪ್ಪುವ , ಬಿಡುವ ನಿರ್ಧಾರ ಓದುಗನಿಗೆ ಸೇರಿದ್ದು.

Saturday, January 25, 2014

ವೈರ ಹರಿದು...

 

ಬದ್ಧ ವೈರವು ಹರಿದು ಸಿದ್ಧಿಸಿದೆ ಗೆಳೆತನವು,
ಬೆಚ್ಚನೆಯ ಆಸನವ ಏರಿ ಕುಳಿತಿರುವೆ,
ನಾವು ಮಾನವರಲ್ಲ, ದ್ವೇಷ ರೋಷಗಳಿಲ್ಲ,
ಪ್ರೀತಿ ವಿಶ್ವಾಸದಲಿ ಬಾಳುವೆವು ನೋಡು ಕೂಡಿ....
 

Nov 2014
 

Monday, December 30, 2013

ಅಲೆತ್ತೂರು ಹಬ್ಬ - ಯಕ್ಷಗಾನದ ನಂಟು ಬಲಗೊಂಡ ನೆನಪುಗಳು ಹಾಗೂ ಮಯ್ಯರ ಯಕ್ಷಗಾನ ಪ್ರೇಮ

ಮನುಷ್ಯ ಸಂಘಜೀವಿ ಆತನಿಗೆ ಇತರರ ಪ್ರೀತಿ, ವಿಶ್ವಾಸ,ಬಲ, ಸಹಕಾರಗಳು ಅತ್ಯಗತ್ಯ. ಒಗ್ಗಟ್ಟಿನಲ್ಲಿ ಬಲವಿದೆ ಈ ಮಾತುಗಳು ಅಕ್ಷರಶಃ ಸತ್ಯ ಎಂದು ಗೋಚರಿಸುವುದು ಅಲೆತ್ತೂರು ಹಬ್ಬದಲ್ಲಿ.
ನನ್ನ ಮಿತ್ರನಾ(ರಾ)ದ ಪ್ರೀತಿಯಿಂದ ನಚ್ಚು(ನರಸಿಂಹ ಮಯ್ಯ) ಈ ವ್ಯಕ್ತಿಯ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೇ, ಪ್ರತೀ ವರ್ಷ ಉತ್ಸಾಹಿ ತರುಣರನ್ನು ಒಟ್ಟು ಸೇರಿಸಿ ಯಕ್ಷಗಾನ ನಡೆಸುವುದು ಸುಲಭದ ಮಾತೇನೂ ಅಲ್ಲ, ಯಕ್ಷಗಾನ ಸಂಘಟನೆ ಎನ್ನುವುದು ಅತ್ಯಂತ ಕ್ಲಿಷ್ಟಕರವಾದ , ಸೂಕ್ಷ್ಮವಾದಂತಹ ಕೆಲಸ. ಹಲವಾರು ಮಂದಿ ಕಲಾವಿದರನ್ನು ಜತೆಗೆ ಸೇರಿಸಿ ಎಲ್ಲರೂ ಒಬ್ಬರಿಗೊಬ್ಬರು ಹೊಂದಿಕೊಂಡು ಯಾವುದೇ ಮನಃಕಶಾಯಳಿಲ್ಲದೆ ಒಂದು ಪ್ರದರ್ಶನವನ್ನು ಏರ್ಪಡಿಸುವಂತೆ ಮಾಡುವುದು ಎಷ್ಟು ಕಷ್ಟ ಎನ್ನುವ ವಿಷಯ ಯಕ್ಷಗಾನವನ್ನು ಸಂಘಟಿಸಿದ ಪ್ರತಿಯೊಬ್ಬರಿಗೂ ಅಥವಾ ಯಕ್ಷಗಾನದ ಬಗ್ಗೆ ತುಸು ಹಿನ್ನೆಲೆಯುಳ್ಳ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಅಂತಹದರಲ್ಲಿ ಸತತವಾಗಿ ಕಳೆದ ೬ ವರ್ಷಗಳಿಂದ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುತ್ತಿರುವ ಅಲೆತ್ತೂರು ಮಯ್ಯ ಬಳಗದವರ ಪ್ರಯತ್ನವನ್ನು ಮೆಚ್ಚಬೇಕಾದದ್ದೆ. ಎಸ್.ವಿ.ಎಸ್ ಕಾಲೇಜಿನಲ್ಲಿ ಆರಂಭಗೊಂಡ ನಮ್ಮ ಸ್ನೇಹ ಮುಂದೆ ಬಂಟ್ವಾಳದ ಮಹಾಲಿಂಗೇಶ್ವರ ಹವ್ಯಾಸಿ ಯಕ್ಷಗಾನ ಮಂಡಳಿಯ ಮೂಲಕ ಮುಂದುವರೆಯಿತು. ಬಳಿಕ ೨೦೦೮ ರಲ್ಲಿ ನರಸಿಂಹ ಮಯ್ಯ ಅವರು ತಮ್ಮ ಬಂಧುಗಳ ಮತ್ತು ಸಹೃದಯಿ ಕಲಾಪ್ರೋತ್ಸಾಹಕರ ನೆರವಿನಿಂದ ಹುಟ್ಟು ಹಾಕಿದ ಸಂಘಟನೆಯೇ ಹವ್ಯಾಸಿ ಯಕ್ಷಗಾನ ಕಲಾ ಸಂಘ ಅಲೆತ್ತೂರು.ನೋಡ ನೋಡುತ್ತಿದ್ದಂತೆಯೇ ೬ ವರ್ಷಗಳು ಹಿಂದೆ ಸರಿದಿವೆ ಮಾತ್ರವಲ್ಲ ೬ ಪ್ರದರ್ಶನಗಳು ನಡೆದಿವೆ ಮತ್ತು ಇತರ ಕಡೆಗಳಲ್ಲಿ ನಮ್ಮ ತಂಡದ ಕಲಾವಿದರು ಪ್ರದರ್ಶನಗಳನ್ನು ನೀಡಿದ್ದಾರೆ.  ನಮ್ಮ ಈ ಸಂಘಕ್ಕೆ ಗುರುಸ್ಥಾನದಲ್ಲಿ ನಿಂತವರು ಭಾಗವತರೂ ವೇಷಧಾರಿಗಳೂ ಆದಂತಹ ಉಂಡೆಮನೆ ಕೃಷ್ಣ ಭಟ್ಟರು ಮತ್ತು ಭಾಗವತರಾದಂತಹ ಪುರುಷೋತ್ತಮ ಭಟ್ಟರು. ಕುಶಲವರ ಕಾಳಗ-2008, ವೀರಮಣಿ ಕಾಳಗ-2009, ಸುದರ್ಶನ ಗರ್ವಭಂಗ-2010, ಏಕಾದಶೀ ದೇವಿ ಮಹಾತ್ಮೆ-2011, ಸುದರ್ಶನ ಗರ್ವಭಂಗ-ಕಾರ್ತವೀರ್ಯಾರ್ಜುನ-2012, ಶುಂಭವಧೆ-2013, ಭಾರ್ಗವ ವಿಜಯ-ಇಂದ್ರಜಿತು ಕಾಳಗ-2013 ಈ ವರೆಗೆ ನಾವು ಪ್ರದರ್ಶಿಸಿದ ಪ್ರದರ್ಶನಗಳು, ಇಲ್ಲಿ ನೆನಪಿಗೋಸ್ಕರ ಹೆಸರಿಸುತ್ತಿದ್ದೇನೆ.


ಎಸ್ ವಿ ಎಸ್ ಕಾಲೇಜಿನಲ್ಲಿ ಉಪಾನ್ಯಾಸಕರಾದ ಪಾಂಡುರಂಗ ರಾವ್, ನಾಗವೇಣಿ ಮಂಚಿ ಮತ್ತು ಶಿವಣ್ಣ ಪ್ರಭು ಅವರುಗಳ ನಿರ್ದೇಶನದಲ್ಲಿ ನಡೆಯುತ್ತಿದ್ದ ಯಕ್ಷಗಾನ ತರಗತಿಗಳಲ್ಲಿ ಭಾಗವಹಿಸುತ್ತಿದ್ದ ನಮಗೆ ಗುರುಗಳಾಗಿ ಬೋಳಂತೂರು ವಿಠಲ ಶೆಟ್ಟರು ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರ ಶಿಷ್ಯೆಯಾದ ಸುಮಂಗಲಾ ಐತಾಳ್ ಇವರು ನಾಟ್ಯಗಾರಿಕೆಯಲ್ಲಿ ಮತ್ತು ಯಕ್ಷಗಾನದ ರಂಗ ತಂತ್ರಗಳ ಬಗ್ಗೆ ತರಬೇತಿಯನ್ನು ನೀಡಿ ನಮ್ಮನ್ನು ಯಕ್ಷಗಾನ ಪ್ರದರ್ಶನಕ್ಕೆ ಅಣಿಗೊಳಿಸುತ್ತಿದ್ದರು. ಸುಮಂಗಲಾ ಐತಾಳ್ ಇವರು ಸ್ವತಃ ಎಸ್ ವಿ ಎಸ್ ಕಾಲೇಜ್ ನಲ್ಲಿ ಕಲಿತು ಧರ್ಮಸ್ಠಳ ಮಂಜುನಾಥೇಶ್ವರ ಕಾಲೇಜ್ ನಲ್ಲಿ ನಡೆಯುತ್ತಿದ್ದ ಯಕ್ಷಗಾನ ಸ್ಪರ್ಧೆಯಲ್ಲಿ ತನ್ನ ಕೃಷ್ಣನ ಪಾತ್ರಕ್ಕೆ ಪ್ರಥಮ ಬಹುಮಾನವನ್ನು ಗಳಿಸಿದ್ದರು ಮಾತ್ರವಲ್ಲ ನಮ್ಮ ಕಾಲೇಜ್ ನ ತಂಡಕ್ಕೂ ಬಹುಮಾನ ದೊರೆಯುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು.


ಹೀಗೆ ಕಾಲೇಜಿನಲ್ಲಿ ನಡೆಯುತ್ತಿದ್ದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮ್ಮ ಯಕ್ಷಗಾನ ಪ್ರದರ್ಶನ ಪ್ರಮುಖ ಕಾರ್ಯಕ್ರಮವಾಗಿ ಪ್ರದರ್ಶಿಸಲ್ಪಡುತ್ತಿತ್ತು. ಯಕ್ಷಗಾನದ ನಾದ ಸದಾ ಪರಿಸರದಲ್ಲಿ ಗುಂಯ್ಗುಡುತ್ತಿರುವ ಬಂಟ್ವಾಳದಲ್ಲಿ ಯಕ್ಷಗಾನಕ್ಕೆ ಪ್ರಾಮುಖ್ಯತೆಯನ್ನು ನೀಡಿ ಯಕ್ಷಗಾನ ಕಲೆಯಲ್ಲಿ ಯುವಕ, ಯುವತಿಯರನ್ನು ತೊಡಗಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು, ವಿದ್ಯಾಗಿರಿ ಬಂಟ್ವಾಳ ಇಲ್ಲಿನ ಪ್ರಾಧ್ಯಾಪಕರು ಮತ್ತು ಆಡಳಿತ ಮಂಡಳಿಯ ಸದಸ್ಯರೆಲ್ಲರೂ ಸ್ತುತ್ಯರ್ಹರು. ಇದೇ ಕಾಲೇಜಿನಲ್ಲಿ ಕಲಿತು ಯಕ್ಷಗಾನ ರಂಗದಲ್ಲಿ ಹವ್ಯಾಸಿಗಳಾಗಿ ತೊಡಗಿಸಿಕೊಂಡಿರುವ ನಮ್ಮ ತಂಡದ ಮತ್ತೀರ್ವ ಕಲಾವಿದರು ಗಣೇಶ ಹೆಗ್ಗಡೆ ಮತ್ತು ಶ್ರೀಕಾಂತ ಸೋಮಯಾಜಿ. ಬಹುಮುಖ ಪ್ರತಿಭೆಯ ಕಲಾವಿದ ಗಣೇಶ ಪುಂಡು ವೇಶಕ್ಕೆ ಹೇಳಿ ಮಾಡಿಸಿದಂತಹ ಅಂಗ ಸೌಷ್ಟವದಿಂದ ಲಾಲಿತ್ಯಪೂರ್ಣವಾದಂತಹ ನಾಟ್ಯಗಾರಿಕೆಯಿಂದ ಪಾತ್ರಕ್ಕೆ ನ್ಯಾಯವನ್ನೊದಗಿಸಬಲ್ಲಂತಹಾ ಕಲಾವಿದ. ಇನ್ನು ಶ್ರೀಕಾಂತ ಸೋಮಯಾಜಿ ಸದಾ ಅಧ್ಯಯನ ಶೀಲತೆಯಿಂದ ಅಂತರ್ಜಾಲ ಮಾಧ್ಯಮವನ್ನು ಸಂಪೂರ್ಣವಾಗಿ ಬಳಸಿಕೊಂಡು ಯಕ್ಷಗಾನದ ವೇಷಗಾರಿಕೆಯ,ಅರ್ಥಗಾರಿಕೆಯ, ಕುಣಿತದ ವಿವಿಧ ಸಾಧ್ಯತೆಗಳನ್ನು ರಂಗದ ಮೇಲೆ  ಆವಿಶ್ಕರಿಸಬಲ್ಲ ಸಮರ್ಥ ಕಲಾವಿದ. ತನ್ನ ಬೀಸುನಡೆಗಳಿಂದ, ಮಾತಿನ ಧಾಟಿಯಿಂದ, ಪಾತ್ರದ ಭಾವನೆಗಳನ್ನು ಸಮರ್ಥವಾಗಿ ಬಿಂಬಿಸುವ ಮೂಲಕ ಪಾತ್ರವನ್ನು ಪುನಃ ಜೀವಂತಗೊಳಿಸಬಲ್ಲ ಕಲಾವಿದ ಎಂದರೂ ತಪ್ಪಾಗಲಾರದು. ಶ್ರೀಕಾಂತನ ಇಂದ್ರಜಿತು, ಏಕಾದಶೀ ದೇವಿಮಹಾತ್ಮೆಯ ಮುರಾಸುರ, ರಕ್ತಬೀಜ ಮುಂತಾದಂತಹ ರಾಜವೇಷದ ಪಾತ್ರಗಳಿಗೆ ಯಾರನ್ನೂ ಅನುಕರಿಸದೇ ತನ್ನದೇ ಆದ ಛಾಪು ಮೂಡುವಂತೆ ಅಭಿನಯಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ. ಇನ್ನು ನಮ್ಮ ಸಂಘಟನೆಯ ಹರಿಕಾರ ನರಸಿಂಹ ಮಯ್ಯ , ಯಾವುದೇ ಪಾತ್ರಕ್ಕೂ ಸೈ, ಪುಂಡುವೇಷಕ್ಕೆ ಪೂರಕವಾಗಬಲ್ಲ ಮೈಕಟ್ಟಿರುವುದರಿಂದ ಅನಾಯಾಸವಾಗಿ ಮಯ್ಯರು ಧೀಂಗಿಣ ಹಾಕುವ ಸಾಮರ್ಥವನ್ನು ಹೊಂದಿದ್ದು ದಣಿವರಿಯದೆ ರಂಗದ ಮೇಲೆ ಕೆಲಸ ಮಾಡುವ ಸಮರ್ಥರು. ರಾಜವೇಷದ ಗಾಂಭೀರ್ಯದ ನಡೆಯನ್ನು ನರಸಿಂಹ ಮಯ್ಯ ಕರಗತಗೊಳಿಸಿಕೊಂಡಿದ್ದಾರೆ. ಹವ್ಯಾಸಿ ಕಲಾವಿದರಲ್ಲಿ ಪುಂಡುವೇಶವನ್ನು ಸಮರ್ಥವಾಗಿ ಮಯ್ಯರು ನಿಭಾಯಿಸಬಲ್ಲವರು. ಅಗತ್ಯಬಿದ್ದಾಗ ಎಡೆವೇಶಗಳಿಗೂ ಮಯ್ಯರು ತಯಾರು. ಮಾತ್ರವಲ್ಲ ನಮ್ಮ ಸಂಘದ ಇತರ ವೇಷಧಾರಿಗಳಿಗೆ ನಾಟ್ಯ ತರಬೇತಿ ಹಾಗೂ ರಂಗತಂತ್ರಗಳನ್ನು ಹೇಳಿಕೊಡುತ್ತಿರುವವರು ಮಯ್ಯರು.


ಮಯ್ಯರ ತಂದೆ, ತಾಯಿ, ಅಣ್ಣ ಗಿರೀಶ್ ಹಾಗೂ ತಮ್ಮ ಶರತ್ ಮತ್ತು ಬಂಧುಗಳ, ತ್ಯಾಗ, ಪ್ರೀತಿ ಮತ್ತು ಅತಿಥಿ ಸತ್ಕಾರದ ವೈಖರಿ ಮತ್ತು ಯಕ್ಷಗಾನದ ಮೇಲಣ ಪ್ರೀತಿಯನ್ನು ಕಂಡಾಗ ಮನಸ್ಸು ಉಲ್ಲಸಿತವಾಗುತ್ತದೆ ಮಾತ್ರವಲ್ಲ ತನ್ನಿಂತಾನೆ ಮಯ್ಯರ ಅಭಿಮಾನಿಯಾಗುತ್ತದೆ. ಎಲ್ಲರನ್ನೂ ತಮ್ಮ ಮನೆಯವರಂತೇ ಪ್ರೀತಿಯಿಂದ ಕಾಣುವ ಸ್ವಭಾವ ಮಯ್ಯರ ಮನೆಯವರನ್ನು ಇತರರಿಂದ ವಿಭಿನ್ನವಾಗಿಸಿ ಅವರನ್ನು ಸರ್ವಜನ ಪ್ರಿಯರನ್ನಾಗಿಸುತ್ತದೆ. ಬೇಸರಿಕೆ, ಉದಾಸನ ತೋರದೆ ಎಲ್ಲವನ್ನೂ ಉತ್ಸಾಹದಿಂದ ನಿರ್ವಹಿಸುವ ಮಯ್ಯರಬೈಲು, ಅಲೆತ್ತೂರಿನ ತರುಣ ಬಳಗದ ಸರ್ವ ಯುವಕರೂ ಈ ನಿಟ್ಟಿನಲ್ಲಿ ಪ್ರಶಂಸಾರ್ಹರು. ನಾ ಕಾರಂತರೂ ಒಂದು ಬಾರಿ ನಮ್ಮಲ್ಲಿ ಅತಿಥಿ ಕಲಾವಿದರಾಗಿ ಬಂದು ಶ್ರೀಹರಿಯ ಪಾತ್ರವನ್ನು ನಿರ್ವಹಿಸಿದ್ದರು ಅವರ ಜತೆಗೆ ಪಾತ್ರಮಾಡುವ ಸದವಕಾಶ ನಮಗೆ ಲಭಿಸಿತ್ತು.



ಅಲೆತ್ತೂರು ಹಬ್ಬ ಪ್ರತೀ ವರ್ಷ ನಾವೆಲ್ಲ ಡಿಸೆಂಬರ್ ತಿಂಗಳು ಬರುವುದನ್ನೇ ಕಾಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದೇನೋ. ನಮ್ಮ ಹೊಸವರ್ಷದ ಆಚರಣೆ ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ನಾವೂ ಯಕ್ಷಗಾನ ಕಲಾವಿದರು ಎಂಬಂತಹ ಜಂಭದ ಮಾತುಗಳಲ್ಲ, ಯಕ್ಷಗಾನಕ್ಕಾಗಿ ನಮ್ಮದೂ ಕಿಂಚಿತ್ ಮಾತ್ರದ ಅಳಿಲ ಸೇವೆ ಅಷ್ಟೆ. ಯಕ್ಷಗಾನದ ನಾದ ಕಿವಿಗಳಲ್ಲಿ ಗುಂಯ್ಗುಡುತ್ತಿದ್ದರೆ ಮನದಲ್ಲೇನೋ ಒಂದು ರೀತಿಯ ಆನಂದ, ಯಕ್ಷಗಾನ ಕಲಾವಿದರ ಜತೆಗಿನ ಒಡನಾಟ ಮತ್ತು ಅವರ ಜತೆಗಿನ ಮಾತುಕಥೆ ಅವರ ಹಾವಭಾವಗಳನ್ನು ಗಮನಿಸುವುದು ನಮಗೆ ಸಂತೋಷದ ವಿಷಯ. ನಮ್ಮ ನಾಡಿನ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ, ಪುರಾಣಗಳಲ್ಲಿನ ನೀತಿ, ಮೌಲ್ಯ, ಕಥೆಗಳನ್ನು ಬೌಧ್ದಿಕವಾಗಿ ಬೋಧಿಸುವ ಸಾಮರ್ಥವಿರುವ ಕಲೆ ಯಕ್ಷಗಾನ, ದೇಹದ ಜತೆಗೆ ಬುದ್ಧಿಗೂ ಇಲ್ಲಿದೆ ಕೆಲಸ. ಮನರಂಜನೆಯೇ ಕೇಂದ್ರವೆಂದು ಕಂಡರೂ ಸಂಗೀತ, ವಾದನ, ನೃತ್ಯ, ಸಾಹಿತ್ಯಗಳಿಂದ ಸಮೃದ್ಧವಾಗಿ ಸೀಮಾತೀತವಾಗಿ ಕಲ್ಪನಾಲೋಕದಲ್ಲಿ ವಿಹರಿಸುವ ಅವಕಾಶ ಯಕ್ಷಗಾನದಲ್ಲಿದೆ, ಪರಂಪರೆಯ ಕ್ರಮಗಳನ್ನು ಬಿಡದೆ ಹೊಸತನ್ನು ಆವಿಶ್ಕರಿಸಿಕೊಳ್ಳಬಲ್ಲ ವಿಪುಲ ಅವಕಾಶಗಳೂ ಇವೆ. ಯಕ್ಷಗಾನದ ಅಮಲು ಒಂದು ಬಾರಿ ಹಿಡಿದರೆ ಮತ್ತೆ ಅದೇ ನಮ್ಮನ್ನು ಅದರತ್ತ ಎಳೆಯುತ್ತದೆ. ನರಸಿಂಹ ಮಯ್ಯರ ಬಂಧುಗಳಾದ ಸುರೇಶ ಉಪಾಧ್ಯರೇ ಇದಕ್ಕೆ ಸಾಕ್ಷಿ ಕಳೆದ ಬಾರಿ ಹೆಗಲಿಗೆ ಕ್ಯಾಮರಾ ಸಿಕ್ಕಿಸಿ ಬೆಂಗಳೂರಿನಿಂದ ಬಂದಿದ್ದ ಅವರು ಈ ಬಾರಿ ತಮ್ಮ ತಮ್ಮ ಹರೀಶ್ ಉಪಾಧ್ಯರನ್ನೂ ಜತೆಗೆ ಕರೆದುಕೊಂಡು ಬಂದು ನಮ್ಮ ಛಾಯಾಚಿತ್ರಗಳನ್ನು ಸಾಕ್ಷಾತ್ಕರಿಸಿ ನೀಡಿದ್ದಾರೆ.

ಮತ್ತೆ ಎಲ್ಲರ ಜತೆ ಬೆರೆಯುವುದಕ್ಕೆ ಇನ್ನೊಂದು ವರುಷ ಕಾಯಬೇಕು, . ಮಯ್ಯರಬೈಲಿನ ಸ್ನೇಹಿತರ,ಬಂಧುಗಳ ಪ್ರೀತಿ, ವಿಶ್ವಾಸ, ಸ್ನೇಹ ನಿರಂತರವಾಗಿ ಹೀಗೆಯೇ ಇರಲಿ ಎಲ್ಲ ಯುವಕ ಸಂಘದವರಿಗೂ ಆದರ್ಶವಾಗಿ ಇಂತಹಾ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂಬ ಬಯಕೆಯೊಂದಿಗೆ.
ಲನಾಭಟ್ಟ...

ನಿಮ್ಮ ಅಭಿಪ್ರಾಯ