Sunday, March 24, 2013

ಸಾರ್ಥಕ್ಯ

೩೫ ವರ್ಷಗಳಿಂದ ತಮ್ಮ ಉಸಿರಲ್ಲಿ ಉಸಿರಿನಂತೆ ಬೆರೆತಿದ್ದ ಅಂಗಡಿಯಿಂದ ಹೊರಗೆ ಬಂದ ಭಟ್ಟರು ಕೊನೆಯ ಬಾರಿಗೆ ಎಂಬಂತೆ ಹಿಂತಿರುಗಿ ನೋಡಿ ದೀರ್ಘವಾದ ಉಸಿರೊಂದನ್ನು ಬಿಟ್ಟರು.ಅವರು ತಮ್ಮ ತಂದೆಯಿಂದ ಬಂದಿದ್ದ ವಹಿವಾಟನ್ನು ಸರಸ್ವತೀ ಸೇವೆ ಎಂಬುದಾಗಿ ಭಾವಿಸಿ ಪುಸ್ತಕದ ಮಳಿಗೆಯನ್ನು ನಡೆಸುತ್ತ ಬಂದಿದ್ದರು. ಭಾರೀ ಎಂಬಂತೆ ದೊಡ್ಡದಲ್ಲವಾದರೂ ಸಣ್ಣದೂ ಅಲ್ಲವೆಂಬಂತೆ, ನಗರದ ತುಸು ಹೊರಗೆ ಚೆನ್ನಾಗಿ ವ್ಯವಹಾರ ಬೆಳೆದು ನಿಂತಿತ್ತು. ತಮ್ಮ ಗೆಳೆಯ ದಿನೇಶ ಕಾಮತರ ದೂರದ ಸಂಬಂಧಿಯೊಬ್ಬ ಭಟ್ಟರ ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.

ಭಟ್ಟರ ಧರ್ಮಪತ್ನಿ ಭಾರತಿ ಸದ್ಗುಣಿ, ಸರಳ ವ್ಯಕ್ತಿತ್ವದ ನಗುಮುಖದಿಂದ ಎಲ್ಲರನ್ನೂ ಆದರದಿಂದ , ಪ್ರೀತಿಯಿಂದ ಕಾಣುತಿದ್ದರು. ಈರ್ವರು ಮಕ್ಕಳನ್ನು ಪಡೆದಿದ್ದ ದಂಪತಿ, ಮಗಳನ್ನು ವಿವಾಹ ಮಾಡಿ ಕೊಟ್ಟಿದ್ದರು, ಮಗ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು, ವಿದೇಶದಲ್ಲಿ ಉದ್ಯೋಗದಲ್ಲಿದ್ದ.

ಬೀದಿಗಿಳಿದು, ಪ್ರತಿದಿನವೂ ತಮ್ಮ ಬಜಾಜ್ ಸ್ಕೂಟರನ್ನು ನಿಲ್ಲಿಸುತ್ತಿದ್ದ ಮರದ ಬುಡಕ್ಕೆ ಬಂದ ಭಟ್ಟರು ಸ್ಕೂಟರ್ ಹತ್ತಿ ಮನೆಗೆ ಹೊರಟರು.
ನಗರದಿಂದ ಹೊರಕ್ಕೆ ಬಂದು ತಮ್ಮ ಗ್ರಾಮದೆಡೆಗೆ ತಿರುಗಿ ಕಚ್ಚಾ ರಸ್ತೆಯಲ್ಲಿ ನಿಧಾನವಾಗಿ ಸ್ಕೂಟರ್ ಚಲಾಯಿಸಿಕೊಂಡು ಹತ್ತು ವರ್ಷಗಳ ಹಿಂದಿದ್ದ ತಮ್ಮ ಊರಿಗೂ ಇಂದಿರುವ ತಮ್ಮ ಊರಿಗೂ ಕಾಣುವ ವ್ಯತ್ಯಾಸಗಳನ್ನು ಯೋಚಿಸುತ್ತಾ ತಮ್ಮ ಮನೆಯ ಅಂಗಳವನ್ನು ತಲುಪಿದರು
ಶ್ರೀರಾಮನ ಆದರ್ಶಗಳನ್ನು ಬಾಳಿನಲ್ಲಿ ಅಳವಡಿಸಿಕೊಂಡಿದ್ದ ಹಿರಿಯರು ಭಟ್ಟರ ಊರನ್ನು ಶ್ರೀರಾಮಪುರವೆಂದು ಕರೆಯಲು ಪ್ರಾರಂಭಿಸಿದ್ದರಂತೆ. ಹಳ್ಳಿಯಲ್ಲಿ ಪುರಾತನವಾದ ಶ್ರೀರಾಮ ಮಂದಿರವೊಂದಿತ್ತು, ಊರ ಮಂದಿ ಶ್ರದ್ಧಾ ಭಕ್ತಿಯಿಂದ ಶ್ರೀರಾಮನನ್ನು ನಂಬಿಕೊಂಡು ಬಂದಿದ್ದರು.
ಪ್ರತೀ ಹಳ್ಳಿಯಂತೆ ಅಂಚೆ ಕಛೇರಿ, ಶಾಲೆ , ನಾಲ್ಕಾರು ಅಂಗಡಿಗಳು ಹಾಗೂ ಸದಾ ಶುದ್ಧವಾದ ಸ್ಫಟಿಕ ಜಲದಿಂದ ತುಂಬಿಕೊಂಡು ಊರ ಕಳೆಯನ್ನು ಹೆಚ್ಚಿಸಿದ್ದ ಕೆರೆಯೂ ಇತ್ತು. ಊರಿನಲ್ಲೊಂದು ಗ್ರಂಥಾಲಯವನ್ನು ಸ್ಥಾಪಿಸಬೇಕೆಂಬ ಭಟ್ಟರ ಆಸೆ ಅವರನ್ನು ತಿಳಿದಿದ್ದ ಎಲ್ಲರಿಗೂ ಅರಿವಿತ್ತು. ಭಟ್ಟರು ಯಾರಲ್ಲೂ ಈ ಬಗ್ಗೆ ಗಹನವಾಗಿ ಹೇಳಿಕೊಂಡಿರದಿದ್ದರೂ ಒಮ್ಮೊಮ್ಮೆ ಮಾತಿನ ಮಧ್ಯೆ ಈ ವಿಷಯ ನುಸುಳಿಬಿಡುತ್ತಿತ್ತು.

ಮನೆಗೆ ಬಂದವರೇ ಆರಾಮ ಕುರ್ಚಿಯಲ್ಲಿ ಕುಳಿತು ಗಹನವಾದ ಯೋಚನೆಯಲ್ಲಿ ಮುಳುಗಿದರು. ಮಧ್ಯಾಹ್ನವಾಗುವುದರ ಮುಂಚೆಯೇ ಮರಳಿಬಂದಿದ್ದ ಭಟ್ಟರನ್ನು ಕಂಡ ಅವರ ಪತ್ನಿ ಆಶ್ಚರ್ಯಗೊಂಡರೂ ಏನನ್ನೂ ಕೇಳದೆ ಬಾಯಾರಿಕೆಗೆ ತಣ್ಣಗಿನ ಮಜ್ಜಿಗೆ ನೀರನ್ನು ತಂದು ಕೊಟ್ಟು ಮತ್ತೆ ತಮ್ಮ ದೈನಂದಿನ ಕೆಲಸದಲ್ಲಿ ತಲ್ಲೀನರಾದರು. ಭಟ್ಟರು ಆ ದಿನ ರಾತ್ರಿ ಕುಳಿತು ಪತ್ರವೊಂದನ್ನು ಬರೆಯುತ್ತಿದ್ದರು, ಅವರ ಪತ್ನಿ ಕುತೂಹಲದಿಂದ ಬಳಿಬಂದು ಭಟ್ಟರು ಪತ್ರ ಕೊನೆಗೊಳಿಸುವವರೆಗೆ ಜತೆಗೆ ಕುಳಿತಿದ್ದರು.

ಆರು ತಿಂಗಳ ಬಳಿಕ ಭಟ್ಟರ ಊರಿನಲ್ಲಿ ಗ್ರಂಥಾಲಯದ ಉದ್ಘಾಟನೆ ನಡೆಯಿತು, ಭಟ್ಟರ ಸಂಗ್ರಹದಲ್ಲಿದ್ದ ನೂರಾರು ಪುಸ್ತಕಗಳು ಗ್ರಂಥಾಲಯದ ಕಪಾಟುಗಳಲ್ಲಿ ಆನಂದವಾಗಿ ನಗುತ್ತಿದ್ದಂತೆ ಕಂಡುಬರುತ್ತಿತ್ತು. ಭಟ್ಟರ ಪತ್ನಿ ಮಗ ಹಾಗೂ ಮಗಳು ತಮ್ಮದೇ ಮನೆಯ ಕಾರ್ಯಕ್ರಮದಂತೆ ಸಂಭ್ರಮದಿಂದ ಉಸ್ತುವಾರಿ ವಹಿಸಿಕೊಂಡು ಪಾಲ್ಗೊಂಡರು. ಭಟ್ಟರ ಪುಸ್ತಕಾಲಯದಲ್ಲಿ ಕೆಲಸ ಮಾಡುತ್ತಿದ್ದ ದಿನೇಶ ಕಾಮತರ ಸಂಬಂಧಿ ಗ್ರಂಥಪಾಲಕರಾಗಿ ನೇಮಕಗೊಂಡಿದ್ದರು. ಸರ್ಕಾರದಿಂದ ಗ್ರಂಥಾಲಯಕ್ಕಾಗಿ ೫೦ ಸಾವಿರ ರೂ ಧನಸಹಾಯ ದೊರಕಿತ್ತು. ಕೆಲವು ವರುಷಗಳ ಹಿಂದೆ ಭಟ್ಟರು ಶ್ರೀರಾಮಪುರದ ಶಾಲೆಯ ಬಳಿ ೫ ಸೆಂಟ್ಸ್ ಜಾಗವನ್ನು ಖರೀದಿಸಿದ್ದರು. ನಗರದಲ್ಲಿದ್ದ ಭಟ್ಟರ ಪುಸ್ತಕ ಮಳಿಗೆಯನ್ನು ಮಾರಾಟ ಮಾಡಿ ಬಂದಿದ್ದ ಹಣದಿಂದ ಗ್ರಂಥಾಲಯದ ಕಟ್ಟದ ನಿರ್ಮಾಣ ಮಾಡಲಾಗಿತ್ತು. ಭಟ್ಟರ ಮಗ ಉಳಿದ ಇನ್ನಿತರ ವೆಚ್ಚಗಳನ್ನು ನಿರ್ವಹಿಸಿದ್ದರು.

ಭಟ್ಟರು ಆದಿನ ಬರೆದ ಕಾಗದವನ್ನು ಅವರ ಪತ್ನಿ ಮರುದಿನ ಅಂಚೆಯಲ್ಲಿ ಕಳುಹಿಸಿದ್ದರು. ಕೆಲವಾರು ಅಮೂಲ್ಯವಾದ ಪುಸ್ತಕಗಳನ್ನು ಗ್ರಂಥಾಲಯಕ್ಕಾಗಿ ಕಳಿಸಿಕೊಡುವಂತೆ ಪ್ರಕಾಶಕರೋರ್ವರಿಗೆ ಭಟ್ಟರು ಹೇಳಿ ಕಳುಹಿಸಿದ್ದ ಪತ್ರವದು. ೩ ತಿಂಗಳ ಬಳಿಕ ಪುಸ್ತಕಗಳನ್ನು ಸಂಗ್ರಹಿಸಿ ಭಟ್ಟರ ವಿಳಾಸಕ್ಕೆ ಪ್ರಕಾಶಕರು ಕಳುಹಿಸಿಕೊಟ್ಟಿದ್ದರು.

ಗ್ರಂಥಾಲಯದ ಗೋಡೆಯ ಮೇಲೆ ತೂಗುಹಾಕಲ್ಪಟ್ಟಿದ್ದ ಭಟ್ಟರ ಚಿತ್ರಪಟಕ್ಕೆ ಹೂಹಾರ ಹಾಕಲಾಗಿತ್ತು. ನೆರೆದಿದ್ದ ಊರಿನ ಹಿರಿಯರ ಮಕ್ಕಳ ಹೆಂಗಳೆಯರ ಸಂತಸವನ್ನು ಕಂಡ ಭಟ್ಟರು ತಮ್ಮ ಕನಸು ನನಸಾದ ಸಾರ್ಥಕತೆಯಿಂದ ಧನ್ಯತೆಯ ಮಂದಹಾಸವನ್ನು ಬೀರುತ್ತಿದ್ದಂತೆ ಕಂಡುಬಂತು.

Wednesday, March 6, 2013

ಹಾಚಿ ಎಂಬ ಶ್ವಾನದ ಕಥೆ

ನೀವು ಸಾಕು ಪ್ರಾಣಿಗಳನ್ನು ಅದರಲ್ಲೂ ಶ್ವಾನ ಪ್ರಿಯರಾಗಿದ್ದಲ್ಲಿ ನೋಡಲೇಬೇಕಾದಂತಹ ಅತ್ಯಂತ ಅದ್ಭುತ ಚಿತ್ರ ಹಾಚಿ ಎ ಡಾಗ್ಸ್ ಟೇಲ್( ಹಾಚಿ ಎಂಬ ಶ್ವಾನದ ಕಥೆ). ಈ ಕಥೆಯು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರಿಸಲಾಗಿದ್ದು, ಮನಕಲಕುವಂತಹಾ ಸಂಭಾಷಣೆ, ಭಾವನಾತ್ಮಕ ಅಭಿನಯ ಹಾಗೂ ಸನ್ನಿವೇಶಗಳಿಂದ ಕೂಡಿ ಐ ಎಮ್ ಡಿ ಬಿ(www.imdb.com) ಪುಟದಲ್ಲಿ ೮ ಅಂಕಗಳನ್ನು ಗಳಿಸಿರುವುದು ಈ ಚಿತ್ರ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತೋರಿಸುತ್ತದೆ.

ಈ ಕಥೆಯ ಪೂರ್ವಾರ್ಧ ಹಾಚಿ ಮತ್ತು ಅದರ ಯಜಮಾನನ ನಡುವಿನ ಪ್ರೀತಿಯನ್ನು ಸಮರ್ಪಕವಾಗಿ ತೋರಿಸಿದರೆ, ಅನಿರೀಕ್ಷಿತವಾದ ತಿರುವಿನಿಂದಾಗಿ ಚಿತ್ರದ ಎರಡನೇ ಭಾಗ ಅದ್ಭುತವಾಗಿ ಮೂಡಿಬರುತ್ತದೆ.
ಚಿತ್ರವೀಕ್ಷಿಸುತ್ತಾ ಮುಂದೆ ಸಾಗುತ್ತಿದ್ದಂತೆ ಒಂದೊಮ್ಮೆಗೆ, ಚಿತ್ರದ ಕಥೆ ಸಪ್ಪೆಯೋ ಎಂಬ ಸಂದೇಹ ನನ್ನನ್ನು ಕಾಡತೊಡಗಿತು ಆದರೆ ಕೆಲವೇ ನಿಮಿಷಗಳಲ್ಲಿ ಆ ಸಂದೇಹ ನಿವಾರಣೆಯಾಗಲ್ಪಟ್ಟಿತು.

ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿಗೆ ಹಿಂದೊಮ್ಮೆ ಮುತ್ತಿಟ್ಟು (ಕು)ಖ್ಯಾತರಾದ ರಿಚರ್ಡ್ ಗೆರೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮಾತ್ರವಲ್ಲ, ಪ್ರೊಫೆಸರ್ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ.
ಅಕೀಟಾ ಎಂಬ ಜಪಾನ್ ತಳಿಯ ನಾಯಿಮರಿಯೊಂದು ರೈಲ್ವೇ ಸ್ಟೇಷನ್ ನಲ್ಲಿ ಅನಿರೀಕ್ಷಿತವಾಗಿ ಪ್ರೊಫೆಸರ್ ಅವರಿಗೆ ಸಿಗುತ್ತದೆ. ಮುದ್ದಾದ ನಾಯಿಮರಿಯ ವಾರಸುದಾರರು ಯಾರೆಂದು ಹುಡುಕುವ ಪ್ರೊಫೆಸರ್ ರವರ ಪ್ರಯತ್ನ ಯಶಸ್ವಿಯಾಗದಿದ್ದಾಗ ನಾಯಿಮರಿಯನ್ನು ಸಾಕುವುದಕ್ಕಾಗಿ ಮುಂದೆಬಂದವರಿಗೆ ದತ್ತು ಕೊಡುವುದು ಎಂದು ಪ್ರೊಫೆಸರ್ ಹಾಗೂ ಅವರ ಪತ್ನಿ ತೀರ್ಮಾನಿಸುತ್ತಾರೆ. ಪ್ರೊಫೆಸರ್ ರವರಿಗಂತೂ ನಾಯಿಮರಿ ಬಹಳಷ್ಟು ಅಚ್ಚುಮೆಚ್ಚಿನದ್ದಾಗಿರುತ್ತದೆ, ಆದರೆ ಅವರ ಪತ್ನಿಗೆ ನಾಯಿಮರಿ ಅವರ ಮನೆಯಲ್ಲಿರುವುದು ಎಳ್ಳಷ್ಟೂ ಇಷ್ಟವಿರುವುದಿಲ್ಲ.  ನಾಯಿಮರಿ ಮತ್ತು ಪ್ರೊಫೆಸರ್ ರ ಆತ್ಮೀಯತೆಯನ್ನು ಕಂಡು ಪ್ರೊಫೆಸರ್ ನಾಯಿಮರಿಯ ಜತೆಗೆ ಮಕ್ಕಳಂತೆ ಆಟವಾಡುತ್ತಾ ಸಂತೋಷವಾಗಿರುವುದನ್ನು ಕಂಡ ಅವರ ಪತ್ನಿ ನಾಯಿಮರಿಯನ್ನು ತಮ್ಮ ಕುಟುಂಬದಲ್ಲಿ ಸೇರಿಸಿಕೊಳ್ಳುವುದಕ್ಕೆ ಒಪ್ಪಿಗೆಯನ್ನು ನೀಡುತ್ತಾರೆ.
ಮುಂದೆ ನಾಯಿಮರಿ ಬೆಳೆದು ದೊಡ್ಡದಾಗುತ್ತದೆ. ಪ್ರೊಫೆಸರ್ ಜತೆಗೆ ದಿನವೂ ಬೆಳಗ್ಗೆ ಅವರು ಕಾಲೇಜಿಗೆ ತೆರಳುವ ವೇಳೆಯಲ್ಲಿ ರೈಲ್ವೇಸ್ಟೇಷನ್ ತನಕ ಬರುವುದು ಹಾಗೂ ಅವರು ಸಂಜೆ ಮರಳುವ ಹೊತ್ತಿನಲ್ಲಿ ಪುನಃ ಬಂದು ಅವರಿಗಾಗಿ ಕಾದು ಅವರ ಜತೆ ಆಟವಾಡುತ್ತಾ ಮನೆಗೆ ಮರಳುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತದೆ. ಮುಂದೆ ಪ್ರೊಫೆಸರ್ ಮಗಳಿಗೆ ಮದುವೆ ನೆರವೇರುತ್ತದೆ ಹಾಚಿಯೂ ಮದುವೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ.
ಮುಂದೆ ಚಿತ್ರದಲ್ಲಿನ ಅನೀರೀಕ್ಷಿತ ತಿರುವಿನಿಂದಾಗಿ ಕೊನೆಯವರೆಗೆ ಹಾಚಿ ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ.
ನನಗಂತೂ ಎಂದೆಂದೂ ಮರೆಯಲಾಗದ ಚಿತ್ರವಾಗಿ ಹಾಚಿಯ ಕಥೆ ಮನಃಪಟಲದಲ್ಲಿ ನೆಲೆಗೊಂಡಿದೆ.
ನೀವೂ ನೋಡಿ ಏನನ್ನಿಸಿತು ಹೇಳಿ....

Click here to download Hachi a Dog's tale via torrent.

Wednesday, February 27, 2013

ಅಲ್ಲಾಹ್ ಕೊಟ್ಟ ಅನಾನಾಸು



ರಾತ್ರಿ ಹತ್ತು ಘಂಟೆಗೆ ಎರಡನೇ ಪಾಳಿಯ ಕರ್ತವ್ಯ ನಿರ್ವಹಿಸಿ ಮನೆಗೆ ವಾಪಸಾಗುತ್ತಿದ್ದೆ.
ದೊಡ್ಡನೆಯ ಜಲ್ಲಿಕಲ್ಲುಗಳನ್ನು ಅರ್ಧ ತನ್ನ ಒಡಲೊಳಗೆ ಹಾಗೂ ಅರ್ಧ ಹೊರಗೆ ಚಾಚಿಕೊಂಡು, ಡಾಮರಿನ ಲೇಪಕ್ಕೋಸ್ಕರ ಕಕ್ಕುಲತೆಯಿಂದ ಕಾಯುತ್ತಾ ಬಿದ್ದುಕೊಂಡಿದ್ದ ಶಾಂತಿಪುರದ ನಿರ್ಜನವಾದ ರಸ್ತೆಯಲ್ಲಿ ನನ್ನ ಬೈಕ್ ಚಲಾಯಿಸುತ್ತಾ ಬರುತ್ತಿದ್ದೆ. ಮಾರ್ಗ ಮಧ್ಯದಲ್ಲಿ ಒಂದು ಅನಾನಾಸು ಹಣ್ಣು ಚಲಿಸದೇ ! ಬಿದ್ದುಕೊಂಡಿತ್ತು.
ಅರರೇ ಇದೇನಚ್ಚರಿಯೆಂದು ಮೆಲ್ಲನೆ ಬೈಕ್ ನಿಲ್ಲಿಸಿ ಹಣ್ಣನ್ನು ಎತ್ತಿ ಚೆನ್ನಾಗಿದೆಯೇ ಎಂದು ಪರೀಕ್ಷಿಸಿದೆ, ಹೆ ಹೆ.... ಹಣ್ಣು ಭಾರೀ ಒಳ್ಳೆದುಂಟು ಮಾರಾಯ್ರೆ... ಬಹಳ ದಿನಗಳಿಂದ ಅನಾನಾಸು ತಿನಬೇಕು ಎಂದಿದ್ದ ಬಯಕೆ ದೂರಾಯ್ತು ಇಂದು ಎಂದು ಮನದಲ್ಲೇ ನೆನೆದೆ. ಆದರೇನು ಮಾಡುವುದು ,ದುಷ್ಟಮನಸ್ಸು, ಯಾಕೆ ಬಿದ್ದದ್ದು ಯಾವಾಗ ಬಿದ್ದದ್ದು ಯಾರದ್ದು ಬಿದ್ದದ್ದು ? ಬಿದ್ದರೆ ಹೆಕ್ಕಿಕೊಂಡು ಹೋಗದ್ದೇಕೆ ?, ಯಾರದ್ದಾದರೂ ತಂತ್ರವೇ ? ಮಂತ್ರವೇ ಎಂದೆಲ್ಲಾ ಅರೆಕ್ಷಣದಲ್ಲಿ ಕೇಳಿತು.  

ಅಷ್ಟರಲ್ಲೇ ಅನಾನಾಸು ಹಣ್ಣು ಬೀಳಿಸಿದ್ದವನ ಮೇಲೆ ಮನಸ್ಸಿನಲ್ಲಿ ಒಂದು ರೀತಿಯ ಕರುಣಾರಸ ಪ್ರವಹಿಸಿತು, ಅಯ್ಯೋ ಪಾಪ ಇಷ್ಟು ದೊಡ್ಡ ಅನಾನಾಸು ಹಣ್ಣಾದರೂ ಆತನ ಕಣ್ತಪ್ಪಿಸಿ ಬಿತ್ತಲ್ಲವೇ, ಚೀಲದಿಂದ ಬಿದ್ದದ್ದಾಗಿರಲಿಕ್ಕಿಲ್ಲ ಮತ್ತೆ ಹೇಗೆ ಬಿತ್ತು ಎಂದು ಯೋಚಿಸುತ್ತಾ ಮುಂದೆ ಹಿಂದೆ ನೋಡಿದೆ. ಓssss ದೂರದಲ್ಲಿ, ಅಷ್ಟೇನು ದೂರವಲ್ಲss ಹತ್ತಿರದಲ್ಲೇ ಒಂದು ಜನ ! ಗಾಡಿಯೊಂದನ್ನು ತಳ್ಳುತ್ತಾ ಹೋಗುತ್ತಿದೆ. ಕ್ಷಮಿಸಿ... ವ್ಯಕ್ತಿಯೊಬ್ಬ ಹೋಗುತ್ತಿದ್ದಾನೆ. ಹ್ಮ್sss ಇನ್ನೇನು ಮಾಡುವುದು, 

ಆತನೇ ನನ್ನೊಡೆಯ ಎಂದು ಆನಾನಾಸು ಹೇಳಿ ನಕ್ಕಂತೆ ಕಂಡಿತು(ಕತ್ತಲೆಯಲ್ಲೂ). ಮೆಲ್ಲನೆ ಆತನ ಬಳಿಗೆ ಬಂದು ಆತನ ಗಾಡಿಯನ್ನು ಪರೀಕ್ಷಿಸಿದೆ, ಎಡಗಡೆ ಮೂಲೆಯಲ್ಲಿ ಮತ್ತೆ ನಾಲ್ಕಾರು ಅನಾನಾಸು ಹಣ್ಣುಗಳು ಒಂದಕ್ಕೊಂದು ಅಂಟಿಕೊಂಡು ಮಲಗಿದ್ದವು. ಕೈಯಲ್ಲಿದ್ದ ಅನಾನಾಸನ್ನು ಎತ್ತಿ ಏನಿದು ಬೀಳಿಸಿಕೊಂಡು ಹೋಗುತ್ತಿರುವೆಯಲ್ಲಾ ತಗೋ ಎಂದು ಕೊಟ್ಟೆ, 

೫೦ ವರ್ಷ ಮೇಲ್ಪಟ್ಟ ಮುಸ್ಲಿಂ ವ್ಯಕ್ತಿ ಆತ, ಬಿಳಿಯ ಗಡ್ಡವನ್ನು ಕತ್ತರಿಸಿ ಮಟ್ಟಸವಾಗಿಟ್ಟಿದ್ದ ಮತ್ತು ಬಿಳಿ ಟೊಪ್ಪಿ ತೊಟ್ಟಿದ್ದ. ಕತ್ತಲೆಯಲ್ಲಿ ಕಣ್ಣು ಕಾಣಿಸಲಿಲ್ಲ ಸ್ವಾಮೀ ಹಾಗೆ ಹಣ್ಣು ಬಿದ್ದುದು ತಿಳಿಯಲಿಲ್ಲ ಎಂದ. ಅನಾನಾಸನ್ನು ಕೈಯಲ್ಲೇ ಹಿಡಿದುಕೊಂಡಿದ್ದ. ಎಷ್ಟು ಕಿಲೋ ಗೆ ಎಂದು ಕೇಳಿದೆ. ೩೦ ಎಂದ, ಮಾರ್ಕೇಟ್‍ನಲ್ಲಿ ? ೨೦-೨೫ ರೂಪಾಯಿಗೆ ಸಿಗುತ್ತದೆ ಸ್ವಾಮಿ ಎಂದ, ಸರಿ ಹೊರಡುತ್ತೇನೆ ಎಂದು ಹೊರಡಲನುವಾದಾಗ ಆತನಿಗೆ ಏನನ್ನಿಸಿತೋ ಗೊತ್ತಿಲ್ಲ, ತಗೊಳ್ಳಿ ಸ್ವಾಮೀ ತೆಗೆದುಕೊಂಡು ಹೋಗಿ ಎಂದು ಅನಾನಾಸನ್ನು ನನ್ನ ಮುಂದೆ ಹಿಡಿದ ! .... 

ಅಯ್ಯೋ ಬೇಡಯ್ಯಾ ನಾನು ಹೀಗೆಯೆ ಬೆಲೆ ವಿಚಾರಿಸಿದ್ದು, ಬೇಡ ಎಂದೆ... ಪರವಾಗಿಲ್ಲ ತೆಗೆದುಕೊಳ್ಳಿ ಎಂದು ಅನಾನಾಸನ್ನು ಮತ್ತಷ್ಟು ಮುಂದೆ ಹಿಡಿದ ಹಣ್ಣಾದ ಅನಾನಾಸಿನ ಸುವಾಸನೆ ನನ್ನ ಮೂಗಿಗೆ ಬಡಿದು ಮನಸ್ಸಿನಲ್ಲಿ ಮತ್ತೆ ಆಸೆ ಚಿಗುರೊಡೆಯಿತು... ೧-೧.೫ ಕಿಲೋ ದಷ್ಟು ತೂಕವಿರಬಹುದು, ಆತನಿಗೆ ಹಣ ಕೊಟ್ಟು ಖರೀದಿಸೋಣವೆಂದರೆ ನನ್ನ ಬಳಿ ಆ ಸಮಯದಲ್ಲಿ ೧೦ರೂ ನೋಟು ಹಾಗೂ ೧ ರೂ ನಾಣ್ಯದ ಹೊರತಾಗಿ ಬೇರೆ ಹಣವಿರಲಿಲ್ಲ. ಒಂದು ರೂ ನಾಣ್ಯವನ್ನು ನಾನು ಆತನಿಗೆ ಕೊಡುವಂತಿಲ್ಲ ಯಾಕೆಂದರೆ ನಮ್ಮಲ್ಲಿ ಹಣದ ಚೀಲವನ್ನು ಪೂರ್ತಿಯಾಗಿ ಖಾಲಿಯಾಗಿಸಬಾರದೆಂಬ ಅಲಿಖಿತ ನಿಯಮವಿದೆ!! ನೋಡಯ್ಯಾ ನನ್ನ ಬಳಿ ಕೇವಲ ೧೦ರೂಪಾಯಿಯ ನೋಟು ಮಾತ್ರವಿರುವುದು ಆದ್ದರಿಂದ ಬೇಡ ನಾನು ತೆಗೆದುಕೊಳ್ಳಲಾರೆ ಎಂದೆ. 

ಪರವಾಗಿಲ್ಲ ೧೦ರೂ ಕೊಡಿ, ನಿಮ್ಮದು ಒಳ್ಳೆಯ ಮನಸ್ಸು ಆದ್ದರಿಂದ ಬಿದ್ದ ಹಣ್ಣನ್ನು ಎತ್ತಿ ಕೊಡುತ್ತಿದ್ದೀರಿ, ಬೇರೆಯವರಾಗಿದ್ದಲ್ಲಿ ಹಾಗೆಯೇ ತೆಗೆದುಕೊಂಡು ಹೋಗುತ್ತಿದ್ದರು, ನನಗೆ ಈ ಹತ್ತು ರೂ ಮತ್ತು ನಿಮಗೆ ಅನಾನಾಸು ಆ ಅಲ್ಲಾಹ್ ಕೊಡುತ್ತಿರುವುದು ಆದ್ದರಿಂದ ತೆಗೆದುಕೊಳ್ಳಿ ಎಂದ.
ಒಹ್ ಅಲ್ಲಾಹ್ ಕೊಟ್ಟ ಅನಾನಾಸು  ಬೇಡವೆಂದು ಹೇಗೆ ಹೇಳಲಿ, ಸರಿ ದೇವನೊಬ್ಬನೇ ನಾಮ ಹಲವು ಎಂದು ಹತ್ತು ರೂಗಳನ್ನು ಆತನ ಕೈಗಿತ್ತು ಅನಾನಾಸನ್ನು ನನ್ನ ಹೆಗಲುಚೀಲಕ್ಕೆ ತುಂಬಿಸಿ ಬೈಕ್ ಚಾಲೂ ಮಾಡಿ ಹೊರಟೆ......

ಬಹಳ ದೂರ ಬಂದರೂ ಮನಸ್ಸಿನಲ್ಲಿ ಹಣ್ಣಿನ ವ್ಯಾಪಾರಿ ಮುದುಕನ ಚಿತ್ರವೇ ತುಂಬಿತ್ತು....

ಕಟ್ಟಿಗೆ ಕಡಿಯುವವನ ಕೊಡಲಿ ನೀರಿಗೆ ಬಿದ್ದ ಕಥೆ ಮನಸ್ಸಿನಲ್ಲಿ ಮತ್ತೆ ಮತ್ತೆ ಹಾದು ಹೋಗುತ್ತಲೇ ಇತ್ತು......


Thursday, November 15, 2012

ಪರಮಾತ್ಮ

My poem was published in Suddi Bidugade on 12th Nov 2012
 
ಪರಮಾತ್ಮ

ಹರಿವ ನೀರಿಗೆ ನಿರಂತರ ಸೆಳೆತವಾಗಿ
ಬಾಂದಳದಲಿ ಬೆಳಗುವ ರವಿಗೆ ಶಕ್ತಿಯಾಗಿ
ಸದಾ ಪರಿಭ್ರಮಣಕೆ ಭೂಮಿಯ ಕಕ್ಷೆಯಾಗಿ
ಅರಳಿದ ಹೂವಿನ ಎಸಳಿನ ಕೆಂಪು ನೀನಾಗಿ

ಕುಲಕೋಟಿಯಭ್ಯುದಯದ ಪ್ರೀತಿಯಾಗಿ
ಬೀಸುವ ಗಾಳಿಯಲಿ ಬೆರೆತ ಉಸಿರಾಗಿ
ಹಾಡುವ ಹಕ್ಕಿಗೊರಳಿನ ನಾದವಾಗಿ
ಕಂಪಾಗಿ, ತಂಪಾಗಿ, ಸೊಂಪಾಗಿ, ಇಂಪಾಗಿ

ಕೋಟಿಸಂಖ್ಯೆಯ ದಾನವರ ನಡುವೆ ಓರ್ವ ಸಂತನಾಗಿ
ಶೂನ್ಯದೊಳಗಿನನಂತ ಬ್ರಹ್ಮಾಂಡವಾಗಿ
ಅನಂತ ದಿಗಂತದಾಚೆಗಿನ ಶೂನ್ಯ ನೀನಾಗಿ
ನಿನ್ನೆ ನಾಳೆಗಳ ನಡುವಿನ ಇಂದು ನೀನಾಗಿ

ನಿರಂತರ ನಿರೀಕ್ಷೆಗಳ ಅಂತ್ಯ ನೀನಾಗಿ
ಪಿತನಾಗಿ ಸುತನಾಗಿ ಸತಿಯಾಗಿ ಪತಿಯಾಗಿ
ಮಾತೆ ಮಮತೆಯ ನಿರ್ಮಲ ಜಲಧಿಯಾಗಿ
ಅಂತರಾತ್ಮದೊಳಗಿನ ಏಕಾಂತ ಸತ್ಯವಾಗಿ

ಜ್ಞಾನ ವಿಜ್ಞಾನಗಳ ಸಂಯುಕ್ತವಾಗಿ
ಸತ್ಯಪಥವಾಗಿ ಶಿಷ್ಟರಕ್ಷಕನಾಗಿ
ಬಿಂದುವಲಿ, ಸಿಂಧುವಲಿ, ಜೀವದಲಿ, ಆತ್ಮದಲಿ
ಬೆರೆತ ಅಮೂರ್ತ ಮೂರ್ತಿಯೇ. . .
       ನಿನಗೆ ಕೋಟಿ ನಮಸ್ಕಾರ...


http://news.suddimahithi.com/puttur/news.asp?s_dateentry=12%2F11%2F2012&econtentPage=4

Thursday, November 8, 2012

ಹಣ ಸುಡುವ ಹಬ್ಬ...

ಸುಡಬೇಡ ಹಣವನೀ, ಕಡಿವತೆರ ಕೊಡಲಿಯಲಿ
ಕುಳಿತ ಕೊಂಬೆಯ ಮೂಢ ಅಡವಿಯೊಳಗೆ...
ಸತ್ಕಾರ್ಯಗಳ ನಡೆಸಿ , ದಾನಾದಿಗಳನಿತ್ತು
ಸಂತಸವ ಕಾಣುತಿರು ದೀನರೊಳಗೆ...  ---- ಲ.ನಾ.ಭಟ್ಟ

Tuesday, October 23, 2012

ಉಸಿರು...

ಕಾವ್ಯವಾಗದೇ ಕಣವು ಕವಿಯು ಜೀವದ ಲೇಪವಿಡಲು
ನೃತ್ಯವಾಗುವುದು ಹೆಜ್ಜೆ ತಾಳ ಮೇಳಗಳ ಪ್ರೀತಿಯಲಿ ವರಿಸಿರಲು
ಕಲೆಯಾಗದೇ ಬರಿಯ ಕಲೆ-ಕಲೆ-ಯೆಂಬ ಬಣ್ಣಗಳು
ಕಥೆಯಾಗದೆ ಸದಾ ಸಾಧನೆಯ ಪರಿಮಳವ ಸೆಳೆವುಸಿರು

Thursday, September 20, 2012

ಮಣ್ಣಬೊಂಬೆ


ಬಿಟ್ಟ ಕಣ್ಣು ಬಿಟ್ಟಂತೆ, ಮುಚ್ಚುವುದಿಲ್ಲ
ತುಟಿ ತೆರೆಯುವುದಿಲ್ಲ ಮಾತ ಹರಿವಿಲ್ಲ
ತಂಗಾಳಿಗೆ ಮುಂದೆ ಇಳಿದ ಕುರುಳು ಹಾರುವುದಿಲ್ಲ
ನಗುವಿಲ್ಲ, ಅಳುವಿಲ್ಲ, ಕೋಪ ತಾಪದ ಕಷ್ಟವಿಲ್ಲ

ಸೋನೆಯಲಿ ನೆನೆದರೆ ನೀನು ತಳಮಳವು ಎನಗಿಲ್ಲ
ಬೆಚ್ಚಗಿನ ಕಂಬಳಿಯ ಹೊದಿಕೆ ಬೇಕಿಲ್ಲ
ಆಸೆಗಳ ಬೆಟ್ಟದ ಮೇಲೆ ಮನೆಯ ಕಟ್ಟಿಲ್ಲ
ತರತರದ ಒಡವೆ ವಸ್ತ್ರಗಳ ಗೊಡವೆ ನಿನಗಿಲ್ಲ


ಕಂಬನಿಯ ಹನಿ ನಿನ್ನ ಅಕ್ಷಿಯಲಿ ಕಾಣಲಿಲ್ಲ
ಸುಖದ ಹಂಬಲವಿಲ್ಲ ದುಃಖದಲೆಯಿಲ್ಲ
ಸದಾ ಮೊರೆವ ಸಾಗರದ ಅಲೆಯ ತೆರದಿ
ನಿತ್ಯನಿರಂತರ ಭಾವದಂತೆ ನೀನು

ಬಂಧನದ ಬದುಕಲ್ಲ, ನಿತ್ಯ ಸಂಘರ್ಷವಿಲ್ಲ
ಮಾತನಾಡದ ಮೂಕ ಜೀವ
ಹಿಂದೆ ಮುಂದಿನ ಕಾಲ ಭೇದವಿಲ್ಲ
ಸಾಗರವ ಸೇರ್ವ ನದಿ ಹಾದಿಯಂತೆ ನೀನು



ಸ್ಫೂರ್ತಿಸೆಲೆ ಜೀವಕಲೆ, ಜೀವದಾತ್ಮ ನೀನು 
ಚಿತ್ರವೊಂದೇ ನಿನದು ನೋಟಗಳು ಮಾತ್ರ ಬೇರೆ
ಹಲವು ತೆರನಾದ ಬಣ್ಣ ಕಾಂಬುದೆನಗೆ
ಬೇರೆ ಎಲ್ಲರಿಗೆ ಮಾತ್ರನೀ ಬರಿಯ ಮಣ್ಣಬೊಂಬೆ...




ದಾನವ...

ರೇಶಿಮೆಯ ಹುಳ ಬಹಳ
ನಾಜೂಕಿನಲಿ ಹೆಣೆದ
ಮನೆಯ ಮಾನವ ಕದ್ದು
ಸೀರೆ ನೇಯ್ದ

ಜೇನುಹುಳ ಸುಳಿಸುಳಿದು
ಮೈಲು ಗಟ್ಟಲೆಯಲೆದು
ಜತನದಲಿ ಕಾಯ್ದಿಟ್ಟ
ಮಧುವ ಕುಡಿದ

ಬಿಸಿಲು ಮಳೆ ಚಳಿಗಾಳಿಗಂಜದೇ
ಎದೆಯೆತ್ತಿ
ಬೃಹದ್ಗಾತ್ರದಲಿ ಬೆಳೆದ
ವೃಕ್ಷಗಳ ಸವರಿದ

ಘೋರವ್ಯಾಘ್ರವೆ ಬರಲಿ
ಕ್ರೂರ ಕರಡಿಯೆ ಇರಲಿ
ಗುರಿನೋಡಿ ಬಡಿದು
ಚಿರನಿದ್ರೆಯಲಿ ನೆಲಕೊರಗಿಸಿದ

ತನ್ನಕಾಲನೆ ಕೊಡಲಿಯಲಿ ಕಡಿವ
ಕಡುಮೂರ್ಖ ತಾನಾಗಿ
ಪ್ರಕೃತಿ ಸಂತುಲನವ
ಹಾಳ್ಗೆಡಹಿದ

ಸುತ್ತ ಧಗಧಗಿಸುವ ಬೆಂಕಿಯಲಿ, ತಂಪೆರೆವ
ಯಂತ್ರಗಳ ತಂತ್ರ  ನಿಲುವುದುಂಟೇ
ಹೊಳೆವ ನಾಣ್ಯವೆ ಇರಲಿ, ಗರಿಗರಿಯ ನೋಟಿರಲಿ,
ಅಸುವ ನೀಗಲು  ಹಸಿವೆ ತಿನಲಪ್ಪುದೇ ?





Monday, July 9, 2012

BMTC Route search , A helpful website

If you are a new comer to Bengaluru(Formally Bangalore) and wondering how to find the route number of the BMTC bus to reach your destination.
OR
If you are a Bengalru resident and want to find the easiest route to your destination.
OR
If you want to travel in BMTC leaving your two/four wheeler behind to avoid the stressful drive.
OR
If you are curious to know about BMTC bus routes.
OR else

For any other reason, you have reached here....


http://narasimhadatta.info/bmtc_query.html is the site that would help you.

All the stops and platform information is also available here.


Good work from the developer, I appreciate his efforts.

We need more such sites which would  help the visitors and people who are looking for such information.


Please note that the site admin has posted a banner at the end of the page which states that the site is not 100% accurate, Still I say it worth to have something than having nothing....

Google maps only provide the routes of Vayu Vajra buses which might not be available on all routes, I believe we can use this site with combination of Google Maps(https://maps.google.co.in/) and have a better result.

Tuesday, December 20, 2011

ಬೆಂಗಳೂರು


ಹಣದ ಹೊಳೆಯಲಿ ತೇಲಬೇಕೆಂಬ ಭ್ರಮೆಯಲಿ
ಈ ಮೂಲೆಯಿಂದಾಮೂಲೆಗೈದು ಕೆಲಸವ ಮಾಡುವರು
ಹರಕು ಮಾಸಿದ ಬಟ್ಟೆ ತೊಟ್ಟವರ ನಡುವಿನಲಿ
ಹಣವನೇ ಮೈತುಂಬ ತೊಟ್ಟವರಿಹರು

ದಿನಪೂರ್ತಿದುಡಿದು ರಸ್ತೆಬದಿಯಲಿ ಊಟ ಸವಿವವರು
ತಂಪನೆಯ ಕಛೇರಿಯಲಿ ವಿದೇಶಿ ನೈವೇದ್ಯ ಸವಿವವರು
ಪಿಜ್ಜಾ ಹಾಟುದಾಗೆಂದು ಸ್ಟೇಟಸ್ಸು ಮೆರೆವವರು
ಬ್ರಾಂಡು ಬ್ರಾಂಡೆಂದು ಹಣದ ಮಳೆ ಸುರಿವವರು

ಸಂಬಂಧಗಳ ಮರೆತು ತಂತ್ರ-ಅಜ್ನಾನದಲಿ ಕಳೆದವರು
ಆಂತರಿಕ ಭಾಂದವ್ಯ ಮರೆತವರು ಅಂತರ್ಜಾಲದಲಿ ಮೋರೆ ಕಾಂಬವರು
ಗಂಡ ಹೆಂಡತಿ ಮುಖವ ವಾರಕ್ಕೊಮ್ಮೆ ಕಾಂಬವರು
ಸಿನೆಮಾ ಪಾರ್ಟಿ ಎನುತ ತಮ್ಮವರ ಮರೆತವರು

ಹತ್ತು ಹೆಜ್ಜೆಗಳಾ ನಡೆಯರೀ ಮೊಂಡು ಜನರು
ಸಂಜೆ ಬೆಳಗೆನದೆ ಜಿಮ್ಮೊಳಗೆ ಮೈಮರೆವವರು
ಒಣದ್ರಾಕ್ಷೆ ಸಿಹಿಯೆಂದು ಭ್ರಮೆಯಲಿರುವವರು
ನಮ್ಮೀ ಬೆಂಗಳೂರಿಗರು ಸಂತೃಪ್ತ ಮಹಾಜನಗಳಿವರು...

ನಿಮ್ಮ ಅಭಿಪ್ರಾಯ