Thursday, September 20, 2012

ಮಣ್ಣಬೊಂಬೆ


ಬಿಟ್ಟ ಕಣ್ಣು ಬಿಟ್ಟಂತೆ, ಮುಚ್ಚುವುದಿಲ್ಲ
ತುಟಿ ತೆರೆಯುವುದಿಲ್ಲ ಮಾತ ಹರಿವಿಲ್ಲ
ತಂಗಾಳಿಗೆ ಮುಂದೆ ಇಳಿದ ಕುರುಳು ಹಾರುವುದಿಲ್ಲ
ನಗುವಿಲ್ಲ, ಅಳುವಿಲ್ಲ, ಕೋಪ ತಾಪದ ಕಷ್ಟವಿಲ್ಲ

ಸೋನೆಯಲಿ ನೆನೆದರೆ ನೀನು ತಳಮಳವು ಎನಗಿಲ್ಲ
ಬೆಚ್ಚಗಿನ ಕಂಬಳಿಯ ಹೊದಿಕೆ ಬೇಕಿಲ್ಲ
ಆಸೆಗಳ ಬೆಟ್ಟದ ಮೇಲೆ ಮನೆಯ ಕಟ್ಟಿಲ್ಲ
ತರತರದ ಒಡವೆ ವಸ್ತ್ರಗಳ ಗೊಡವೆ ನಿನಗಿಲ್ಲ


ಕಂಬನಿಯ ಹನಿ ನಿನ್ನ ಅಕ್ಷಿಯಲಿ ಕಾಣಲಿಲ್ಲ
ಸುಖದ ಹಂಬಲವಿಲ್ಲ ದುಃಖದಲೆಯಿಲ್ಲ
ಸದಾ ಮೊರೆವ ಸಾಗರದ ಅಲೆಯ ತೆರದಿ
ನಿತ್ಯನಿರಂತರ ಭಾವದಂತೆ ನೀನು

ಬಂಧನದ ಬದುಕಲ್ಲ, ನಿತ್ಯ ಸಂಘರ್ಷವಿಲ್ಲ
ಮಾತನಾಡದ ಮೂಕ ಜೀವ
ಹಿಂದೆ ಮುಂದಿನ ಕಾಲ ಭೇದವಿಲ್ಲ
ಸಾಗರವ ಸೇರ್ವ ನದಿ ಹಾದಿಯಂತೆ ನೀನು



ಸ್ಫೂರ್ತಿಸೆಲೆ ಜೀವಕಲೆ, ಜೀವದಾತ್ಮ ನೀನು 
ಚಿತ್ರವೊಂದೇ ನಿನದು ನೋಟಗಳು ಮಾತ್ರ ಬೇರೆ
ಹಲವು ತೆರನಾದ ಬಣ್ಣ ಕಾಂಬುದೆನಗೆ
ಬೇರೆ ಎಲ್ಲರಿಗೆ ಮಾತ್ರನೀ ಬರಿಯ ಮಣ್ಣಬೊಂಬೆ...




ದಾನವ...

ರೇಶಿಮೆಯ ಹುಳ ಬಹಳ
ನಾಜೂಕಿನಲಿ ಹೆಣೆದ
ಮನೆಯ ಮಾನವ ಕದ್ದು
ಸೀರೆ ನೇಯ್ದ

ಜೇನುಹುಳ ಸುಳಿಸುಳಿದು
ಮೈಲು ಗಟ್ಟಲೆಯಲೆದು
ಜತನದಲಿ ಕಾಯ್ದಿಟ್ಟ
ಮಧುವ ಕುಡಿದ

ಬಿಸಿಲು ಮಳೆ ಚಳಿಗಾಳಿಗಂಜದೇ
ಎದೆಯೆತ್ತಿ
ಬೃಹದ್ಗಾತ್ರದಲಿ ಬೆಳೆದ
ವೃಕ್ಷಗಳ ಸವರಿದ

ಘೋರವ್ಯಾಘ್ರವೆ ಬರಲಿ
ಕ್ರೂರ ಕರಡಿಯೆ ಇರಲಿ
ಗುರಿನೋಡಿ ಬಡಿದು
ಚಿರನಿದ್ರೆಯಲಿ ನೆಲಕೊರಗಿಸಿದ

ತನ್ನಕಾಲನೆ ಕೊಡಲಿಯಲಿ ಕಡಿವ
ಕಡುಮೂರ್ಖ ತಾನಾಗಿ
ಪ್ರಕೃತಿ ಸಂತುಲನವ
ಹಾಳ್ಗೆಡಹಿದ

ಸುತ್ತ ಧಗಧಗಿಸುವ ಬೆಂಕಿಯಲಿ, ತಂಪೆರೆವ
ಯಂತ್ರಗಳ ತಂತ್ರ  ನಿಲುವುದುಂಟೇ
ಹೊಳೆವ ನಾಣ್ಯವೆ ಇರಲಿ, ಗರಿಗರಿಯ ನೋಟಿರಲಿ,
ಅಸುವ ನೀಗಲು  ಹಸಿವೆ ತಿನಲಪ್ಪುದೇ ?





ನಿಮ್ಮ ಅಭಿಪ್ರಾಯ